Saturday, May 27, 2006

ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ. ಆದರೆ ಮೀಸಲಾತಿ, ಕೋಮುಗಲಭೆ, ಜಾತಿಕಲಹಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಆವರಿಸುತ್ತದೆ. ರಾಜಕೀಯ ಪಕ್ಷಗಳು ಇವುಗಳನ್ನು ಉಪಯೋಗಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತವೆ.

ನಾನು ನನ್ನ ಬ್ಲಾಗ್‌ನಲ್ಲಿ ಮೀಸಲಾತಿ ವಿಷಯದ ಬಗ್ಗೆ ಬರೆಯುವಾಗ ನನ್ನ ಪೂರ್ವಾಗ್ರಹಗಳು ಮತ್ತು ಜಾತಿಯ ಪ್ರಭಾವವಲಯದಿಂದ ಹೊರಬಂದು ವಿಚಾರ ಮಾಡುವುದು ತುಸು ಕಷ್ಟವೇ ಆಯಿತು. ಮೀಸಲಾತಿಯು ಜಾತಿಯ ಭಾವನಾತ್ಮಕ ಪರಿಧಿಯೊಳಗೇ ಬರುವುದರಿಂದ ಅದರ ಬಗೆಗಿನ ಭಾವೋದ್ರೇಕಗಳು ಉತ್ತುಂಗದಲ್ಲಿರುವುದು ಸಹಜ. ಈ ಮೀಸಲಾತಿ ಪರ-ವಿರೋಧ ಪ್ರತಿಭಟನೆಗಳು ಮೇಲ್ನೋಟಕ್ಕೆ ಕೇವಲ ಅರ್ಹತೆ, ಪ್ರತಿಭೆ ಮೇಲೆ ಆಧಾರಿತವಾಗಿವೆ ಎಂದನಿಸಬಹುದು. ಆದರೆ ವಾಸ್ತವದಲ್ಲಿ ಈ ಪ್ರತಿಭಟನೆಗಳ (ಪರ ಮತ್ತು ವಿರೋಧ) ಹಿಂದೆ ಜಾತಿಯ ಪ್ರಭಾವ ದಟ್ಟವಾಗಿರುತ್ತದೆ.

ಓರ್ವ ವ್ಯಕ್ತಿ ಮೀಸಲಾತಿಯನ್ನು ವಿರೋಧಿಸಿದರೆ, ಅವನಿಗೆ ಹಿಂದುಳಿದವರ ಏಳಿಗೆ ಬಯಸದ ದುರಹಂಕಾರಿ, ಬನಿಯಾ ಎಂಬೆಲ್ಲಾ ಹಣೆಪಟ್ಟಿ ತಗುಲುತ್ತದೆ. ಒಂದು ವೇಳೆ ಮೀಸಲಾತಿಯನ್ನು ಸಮರ್ಥಿಸಿಕೊಂಡರೆ ಅವನು ಸ್ವಂತಕಾಲಿನಲ್ಲಿ ಮೇಲೇರುವಷ್ಟು ಬುದ್ಧಿಶಕ್ತಿ ಇಲ್ಲದ ತಿರುಕ ಎಂದನಿಸಿಕೊಳ್ಳುತ್ತಾನೆ. ಈ ವಿಷಯದ ಬಗ್ಗೆ ಯಾವುದಾದರೂ ಬ್ಲಾಗ್‌ನಲ್ಲಿ ಚರ್ಚೆಯಾದರೆ ಅಲ್ಲಿ ವ್ಯಕ್ತವಾಗುವ ಬಹಳಷ್ಟು ಪ್ರತಿಕ್ರಿಯೆಗಳು ಮತ್ಸರ, ಅಶ್ಲೀಲ, ತುಚ್ಛ ಭಾವನೆಗಳಿಂದ ಕೂಡಿರುವುದನ್ನು ನೀವು ನೋಡಬಹುದು.

ಒಮ್ಮೆ ಒಂದು ವ್ಯವಸ್ಥೆ ರಚಿತವಾಯಿತೆಂದರೆ ಅದನ್ನು ಬಿಟ್ಟು ಹೊರಳಿ ನೋಡಲು ನಮಗೆ ಸಾಧ್ಯವಾಗದು. ಈ ಮೀಸಲಾತಿಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡುವಷ್ಟು ನಮಗೆ ವಿವೇಚನೆ ಇರುವುದಿಲ್ಲ. ಒಂದು ಸಿದ್ಧಾಂತಕ್ಕೆ ಕುರುಡರಾಗಿ ಬದ್ಧರಾಗಿಬಿಡುತ್ತೇವೆ. ನಮ್ಮ ಬದ್ಧತೆಗಳಿಗೆ ಅನುಗುಣವಾಗಿ ಸಿದ್ಧಾಂತಗಳನ್ನು ವಿಚಾರಗಳನ್ನು ಹೆಣೆಯುತ್ತಾ ಹೋಗುತ್ತೇವೆ.

ಎನ್‌ಡಿಟಿವಿ ಚಾನೆಲ್‌ನಲ್ಲಿ ನಡೆದ ಒಂದು ಚರ್ಚೆಯಲ್ಲಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮೀಸಲಾತಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದರು. "ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಮೀಸಲಾತಿ ಪದ್ಧತಿಗಳು ರೂಢಿಯಲ್ಲಿದ್ದು ಪರಿಣಾಮಕಾರಿಯಾಗಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮೀಸಲಾತಿಗಿಂತ ಉತ್ತಮವಾದ ಸಾಧನ ಬೇರೆ ಯಾವುದೂ ನನಗೆ ಕಂಡಿಲ್ಲ. ನಿಮಗೇನಾದರೂ ಅದು ತೋರಿದರೆ ದಯವಿಟ್ಟು ತಿಳಿಸಿ, ನಾವು ಪರಿಗಣಿಸುತ್ತೇವೆ" ಎಂದು ಚಿದಂಬರಂ ಅವರು ಸ್ಪಷ್ಟಪಡಿಸಿದ್ದರು. ಶಿಕ್ಷಣವು ಅರ್ಹತೆ (ಮೆರಿಟ್) ಆಧಾರಿತವಾಗಿರಬೇಕು ಎನ್ನುವವರು ಕ್ಯಾಪಿಟೇಶನ್ ಶುಲ್ಕದ ಬಗ್ಗೆ ಚಕಾರವೆತ್ತುವುದಿಲ್ಲ ಎಂದೂ ಕೆಲವರು ವಾದಿಸಿದ್ದರು. ಮೀಸಲಾತಿಯಿಂದ ಪ್ರವೇಶ ಗಿಟ್ಟಿಸುವವರಿಗೆ ತಕ್ಕ ಅರ್ಹತೆ ಇದೆ ಎಂದ ಮೇಲೆ ಮೀಸಲಾತಿ ಇಲ್ಲದೆಯೇ ಇತರರಂತೆ ಅವರೂ ಪ್ರಯತ್ನಿಸಬೇಕು ಎಂಬ ಧ್ವನಿಗಳೂ ಕೇಳಿಬಂದಿತ್ತು.

ಶತಮಾನಗಳಿಂದ ಸಮಾಜದ ಕೆಳಸ್ತರಗಳಲ್ಲೇ ಒದ್ದಾಡಿಕೊಂಡು ವಿದ್ಯೆಯ ಗಾಳಿ ಸೋಂಕದೇ ಉಳಿದುಕೊಂಡ ವರ್ಗಗಳಿವೆ. ಅಂಥವರಿಗೆ ಮೇಲೇರಲು ಅವಕಾಶದ ಸಹಾಯಹಸ್ತ ನೀಡುವುದೇ ಮೀಸಲಾತಿಯ ಮೂಲ ಉದ್ದೇಶವಾಗಿದೆ. ಈ ಉದ್ದೇಶವನ್ನು ಸಮರ್ಥವಾಗಿ, ಪರಿಪೂರ್ಣವಾಗಿ ಪೂರೈಸುವ ಏಕೈಕ ಸಾಧನ "ಶಿಕ್ಷಣ" ಎಂಬುದು ಎಲ್ಲರಿಗೂ ತಿಳಿದದ್ದೇ. ಪ್ರತಿಯೊಬ್ಬರಿಗೂ "ಸಮಾನ"ವಾದ ಶಿಕ್ಷಣ, "ಸಮಾನ"ವಾದ ಅವಕಾಶ ಸಿಕ್ಕರೆ ಮೀಸಲಾತಿಯ ರಗಳೆಗಳೇ ಇರುವುದಿಲ್ಲ. ಆದರೆ ಯಾರೂ ಈ "ಶಿಕ್ಷಣ" ಬೇಕು ಎಂದು ಹೋರಾಟ ಮಾಡುವುದಿಲ್ಲ, ಏಕೆಂದರೆ ಅದರಲ್ಲಿ ಜಾತಿ, ಧರ್ಮಗಳಂತಹ ಭಾವೋದ್ರೇಕಗಳಿರುವುದಿಲ್ಲವಲ್ಲ.

ಪ್ರತಿಯೊಬ್ಬರಲ್ಲೂ ಅವನದೇ ವೈಶಿಷ್ಟ್ಯಗಳಿವೆ. ಕಡುಬಡವರು ಅಥವಾ ಸಮಾಜದ ತೀರಾ ಕೆಳಸ್ತರದಲ್ಲಿ ಕೆಲಸ ಮಾಡುವವರಲ್ಲಿ ಇರುವ ಬುದ್ಧಿಶಕ್ತಿ ಯಾವುದೇ ಉನ್ನತ ಹುದ್ದೆಯಲ್ಲಿರುವನಷ್ಟೇ ಸಮಾನವಾಗಿರುತ್ತದೆ. ಇದು ಸುಳ್ಳು ಎಂದು ನಿಮಗನಿಸಿದರೆ ನೀವು ಓರ್ವ ಸಾಮಾನ್ಯ ವ್ಯಕ್ತಿಯಾಗಿ ಸಮಾಜದ ಕೆಳಸ್ತರದಲ್ಲಿ ಕೆಲ ದಿನಗಳನ್ನು ಕಳೆದು ನೋಡಿರಿ. ಸತ್ಯ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ.

ಸಾಮಾಜಿಕ ವ್ಯವಸ್ಥೆಯ ಲೋಪದಿಂದ ಸೂಕ್ತ ವಾತಾವರಣದ ಕೊರತೆಯಿಂದ ಅಂತಹ ಕೋಟಿಗಟ್ಟಲೆ ಮಾನವಸಂಪನ್ಮೂಲಗಳು ವ್ಯರ್ಥವಾಗಿ ಹೋಗುತ್ತಿವೆ. ಇದೂ ಒಂದು ರೀತಿಯ 'Brain Drain'. ಭಾರತದ ಆರ್ಥಿಕ ವ್ಯವಸ್ಥೆ ಸಬಲಗೊಳ್ಳಬೇಕಾದರೆ ಎಲ್ಲಾ ಮಾನವ ಸಂಪನ್ಮೂಲಗಳು ಸಬಲವಾಗಿರಬೇಕು. ಬೆರಳೆಣಿಕೆ ಮಂದಿಯಿಂದ ಅಭಿವೃದ್ಧಿ ಸಾಧಿಸಲಾಗದು. ಕೆಳ ಸ್ತರದಲ್ಲಿರುವ ಮಂದಿ ಮೇಲೆ ಬರಲು ಸೂಕ್ತ ವಾತಾವರಣ ಮತ್ತು ಅವಕಾಶಗಳಿರಬೇಕು. ಹಾಗೂ ಅಂತಹ ಅಗಾಧ ಮಾನವ ಸಂಪತ್ತುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತಹ ಆರ್ಥಿಕ ಅಭಿವೃದ್ಧಿ ವ್ಯವಸ್ಥೆ ರಚಿತವಾಗಬೇಕು.

ಆಗಲೇ ಹೇಳಿದ ಹಾಗೆ ಕೆಳಸ್ತರದವರು ಮೇಲೆ ಏರಲು ಇರುವ ಪರಿಣಾಮಕಾರಿ ಸಾಧನವೆಂದರೆ "ಶಿಕ್ಷಣ". ಪ್ರತಿಯೊಬ್ಬರಿಗೂ ಶಿಕ್ಷಣ ತಲುಪಬೇಕು. ಹಾಗೆ ತಲುಪಬೇಕಾದರೆ ಶಿಕ್ಷಣ ಉಚಿತವಿರಬೇಕು. ಶಿಕ್ಷಣದ ಗುಣಮಟ್ಟ ಅತ್ಯುತ್ತಮವಿರಬೇಕು. ಎಲ್ಲಡೆ ಶಿಕ್ಷಣ ಸಮಾನವಾಗಿರಬೇಕು. ಇದರಿಂದ ಗುಣಮಟ್ಟದ ಏರುಪೇರು ತಪ್ಪುತ್ತದೆ. ಎಲ್ಲರಿಗೂ ಸಮಾನ ಅವಕಾಶ ಪ್ರಾಪ್ತವಾಗುತ್ತದೆ.

ಇದು ಕಾಲ್ಪನಿಕ ಅಥವಾ ಅವಾಸ್ತವ ಸಿದ್ಧಾಂತವಲ್ಲ. ಹಲವು ದೇಶಗಳಲ್ಲಿ ಉಚಿತ ಶಿಕ್ಷಣ ಜಾರಿಯಲ್ಲಿದೆ. ಈ ವ್ಯವಸ್ಥೆಗೆ ಅಪಾರ ಹಣ ವ್ಯಯವಾಗುತ್ತದಾದರೂ ಅದು ಭವಿಷ್ಯಕ್ಕೆ ನಾವು ಹಾಕುತ್ತಿರುವ ಬಂಡವಾಳದಂತಾಗುತ್ತದೆ. ಆದರೆ ನಮ್ಮ ರಾಜಕೀಯ ನೇತಾರರಿಗೆ ಇದನ್ನು ಆರಂಭಿಸುವ ಗಂಡೆದೆ ಇದೆಯೇ? ರಾಜಕಾರಣಿಗಳನ್ನು ಬಿಟ್ಟುಬಿಡಿ, ನಮ್ಮನಿಮ್ಮಲ್ಲಿ ಈ ಬಗ್ಗೆ ಆಸಕ್ತಿ ತೋರಿಸುವ (ಹೋರಾಟ ಮಾತು ಬೇರೆ) ಮಂದಿ ಯಾರಾದರೂ ಇದ್ದಾರೆಯೇ? ಆಸಕ್ತಿ ತೋರಿಸುವುದಿಲ್ಲ. ಏಕೆಂದರೆ ಅವರ ಭಾವನೆಗಳನ್ನು ಉದ್ರೇಕಿಸುವ ಶಕ್ತಿ ಇದಕ್ಕಿಲ್ಲ.

7 Comments:

Blogger bhadra said...

ನಿಮ್ಮ ಚಿಂತನೆಗಳು ಸಮತೋಲನದಲ್ಲಿದೆ. ಇಂದಿನ ಪರಿಸ್ಥಿತಿಯನ್ನು ಮಾರ್ಮಿಕವಾಗಿ ವಿಶ್ಲೇಷಿಸಿದ್ದೀರ.

ಇದೇ ಹಾದಿಯಲ್ಲಿ ನನ್ನ ಅನಿಸಿಕೆಯ ಎರಡು ಮಾತುಗಳು. ಮೀಸಲಾತಿ ಕೇವಲ ಜಾತಿಯ ಆಧಾರದ ಮೇಲೆ ನೀಡುವುದು ಸರಿಯಲ್ಲ. ಆರ್ಥಿಕ ಮಟ್ಟದಲ್ಲಿ ಕೆಳಗಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದರೆ ಸಾಕಷ್ಟೇ. ಅವರು ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿಯನ್ನು ಸರಕಾರ ಒದಗಿಸಬೇಕು. ಜಾತಿಯ ಆಧಾರದ ಮೇಲೆ ಮೀಸಲಾತಿ ಸೌಲಭ್ಯ ಪಡೆದವರು, ಆರ್ಥಿಕವಾಗಿ ಸಬಲರಾದವರೂ, ತಮ್ಮ ಮಕ್ಕಳಿಗೂ ಮೀಸಲಾತಿಯನ್ನು ಕೇಳುವುದು ಈ ದೇಶದಲ್ಲಿ ಅಲ್ಲದೇ ಬೇರೆಲ್ಲಿಯಾ ಕಾಣೆವು. ಕೆಳ ವರ್ಗದಲ್ಲಿದ್ದು, ಆರ್ಥಿಕವಾಗಿ ದುರ್ಬಲರಾಗಿ ಗ್ರಾಮೀಣ ಪ್ರದೇಶದಲ್ಲಿರುವ ಎಷ್ಟು ಮಂದಿಗೆ ಈ ಮೀಸಲಾತಿ ಸೌಲಭ್ಯ ದೊರದುತ್ತಿದೆ.
ಈ ಹಿಂದೆ ಕ್ರೀಮಿ ಲೇಯರ್ ಎಂಬ ಮಿತಿಯನ್ನು ಮೀಸಲಾತಿಯೊಡನೆ ಜೋಡಿಸಹೊರಟಿದ್ದರು. ಅದು ಸದುದ್ದೇಶದಿಂದಲೇ ಪ್ರಾರಂಭವಾಗಿದ್ದು. ಈಗೆಲ್ಲಿದೆ ಅದು?

6:26 AM  
Blogger Sarathy said...

ಹೌದು ತವಿಶ್ರೀಗಳೇ ನಿಮ್ಮ ಮಾತು ಅಕ್ಷರಶಃ ನಿಜ. ಹಿಂದುಳಿದ ವರ್ಗಗಳಲ್ಲಿರುವ ಆರ್ಥಿಕವಾಗಿ ಮುಂದುವರಿದ ಜನರೇ ಹೆಚ್ಚಾಗಿ ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವುದು ಸತ್ಯ. ಇದು ಮೀಸಲಾತಿಯ ಮೂಲ ಉದ್ದೇಶವನ್ನೇ ಅಪಹಾಸ್ಯ ಮಾಡುತ್ತಿದೆ.

10:58 AM  
Blogger Anveshi said...

ನನ್ನ ಪ್ರಕಾರ ಕ್ಯಾಪಿಟೇಶನ್ ಶುಲ್ಕಕ್ಕೆ ಮೀಸಲಾತಿ ಹೇರಬೇಕು. ಯಾಕೆಂದರೆ ಕ್ಯಾಪಿಟೇಶನ್ ಶುಲ್ಕ ಇರುವುದು ಉನ್ನತ ಶಿಕ್ಷಣಕ್ಕೆನೇ ಅಲ್ಲವೇ? ಮತ್ತೆ ಹಾಗೆ ಸಂಗ್ರಹವಾಗುವ ಹಣದಲ್ಲೂ ಇಂತಿಷ್ಟು ಇವರಿಗೆ, ಮತ್ತಿಷ್ಟು ಅವರಿಗೆ ಅಂತ ಮೀಸಲಾತಿಗಳಿರಬೇಕು.

ಮತ್ತೆ, ರಾಜಕಾರಣಿಗಳಿಗೆ ಓಟು ಕೊಡುವಲ್ಲಿಯೂ ಮೀಸಲಾತಿ ಬೇಕು ಅಂತ ನನ್ನ ಖಚಿತ ಅಭಿಪ್ರಾಯ. ಹಾಗಿದ್ದರೆ ಮಾತ್ರ ಭಾರತವೊಂದು ಸಶಕ್ತ ಜಾತ್ಯಾಧಾರಿತ ರಾಷ್ಟ್ರವಾಗಿ ಬೆಳೆದೀತು.
ಜೈ ವೀಪಿ ಸಿಂಗ್ (ಮಾಜಿ ಪ್ರಧಾನಿ), ಜೈ ಅರ್ಜುನ್ ಸಿಂಗ್ (ಭಾವಿ ಪ್ರಧಾನಿ)!!!

5:40 PM  
Blogger Sarathy said...

ಅಸತ್ಯಾನ್ವೇಷಿಗಳೇ, ಇದೊಂದು ಮೀಸಲು ಪ್ರದೇಶ. ಇಲ್ಲಿ ನೀವು ಅಕ್ರಮ ಪ್ರವೇಶ ಮಾಡಿದ್ದೀರಾದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.
ಮತದಾನದಲ್ಲಿ ಮೀಸಲಾತಿ... ವಾಹ್ ಎಂತಹ ಕಾನ್ಸೆಪ್ಟು. ಸ್ವಾಮೀ, ನಿಮ್ಮ ಈ ಕಾನ್ಸೆಪ್ಟು ರಾಜಕಾರಣಿಗಳಿಗೆ ಬಿದ್ದರೆ ಶೀಘ್ರ ಅನುಷ್ಟಾನಗೊಳಿಸಿಬಿಡ್ತಾರೆ. ಜೋಕೆ...

9:22 PM  
Blogger Vishwanath said...

ಸಾರಥಿಯವರೇ,
ಸೀಮಿತ ಸಮುದಾಯದವರಿಗೆ ಮಾತ್ರ ಮೀಸಲಾತಿ ಎಂಬ ಕಲ್ಪನೆಯೇ ಈಗಿನ ದಿನಗಳಲ್ಲಿ ಅಸಂಬದ್ಧ. ಸ್ವಾತಂತ್ರ್ಯ ದೊರೆತು 58 ವರ್ಷಗಳ ಬಳಿಕವೂ ನಾವು ಇನ್ನೂ ಅದೇ ಮೀಸಲಾತಿಗೆ ಜೋತು ಬೀಳುತ್ತಿದ್ದೇವೆ ಎಂದರೆ ನಾಚಿಕೆಗೇಡು. ಸರಕಾರಕ್ಕೆ ನಿಜವಾಗಿಯೂ ಕಾಳಜಿಯಿದೆಯಂದಾದಲ್ಲಿ, ಎಲ್ಲಾ ಸಮುದಾಯದ ಬಡವರಿಗೂ ಮೀಸಲಾತಿ ವಿಸ್ತರಿಸಲಿ.

ಇನ್ನು ನೀವು ಉಚಿತ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಿದ್ದೀರಿ. ದೇಶದ ರಕ್ಷಣೆಗೆ ಎಗ್ಗಿಲ್ಲದೇ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವಾರ್ಷಿಕ ಬಜೆಟ್ ನಲ್ಲಿ ತೆಗೆದಿಡುವ ನಮ್ಮ ಸರಕಾರಗಳು, ಶಿಕ್ಷಣದ ವಿಷಯ ಬಂದಾಗ ಕಂಜೂಸುಗಳಾಗಿಬಿಡುತ್ತವೆ. ಸರಕಾರಕ್ಕೆ ಹೊರೆಯಾಗುತ್ತದೆ ಎಂದಾದಲ್ಲಿ, ಉಚಿತ ಶಿಕ್ಷಣ ನೀಡುವುದು ಬೇಡ ಆದರೆ ಅದು ಶ್ರೀ ಸಾಮಾನ್ಯರಿಗೆ ನಿಲುಕುವುದು ಬೇಡವೇ?

ಇಂದು ನೀವು ಮಕ್ಕಳನ್ನು ನರ್ಸರಿಗೆ ಸೇರಿಸಲು ಹೋದರೆ ಸಾವಿರಾರು ರೂಪಾಯಿ ಪೀಕಬೇಕಾಗುತ್ತದೆ. ಇನ್ನು ಉನ್ನತ ಶಿಕ್ಷಣ- ಉಳ್ಳವರಿಗೆ ಮಾತ್ರ ಎಂಬಂತಾಗಿಬಿಟ್ಟಿದೆ.

ರಕ್ಷಣೆಗೆ ವ್ಯಯಿಸುವ ಶೇ.10 ರಷ್ಟಾದರೂ ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟರೆ, ಎಲ್ಲರಿಗೂ ಶಿಕ್ಷಣ ನಿಲುಕೀತು. ಇಲ್ಲದಿದ್ದರೆ ಇದು ಉಳ್ಳವರಿಗೆ ಮಾತ್ರ ಉಳಿದೀತು.

12:23 PM  
Blogger Sarathy said...

ಬಡವರಿಗೆ ಶಿಕ್ಷಣ ಕೈಗೆಟುಕದಂತಾಗಿದೆ. ಬಡಮನಸ್ಥಿತಿಯ ಆಡಳಿತ ವ್ಯವಸ್ಥೆ, ರಾಜಕಾರಣಿಗಳಿಗೆ ಬಡವರೇ ತಾನೇ ಬೇಕಿರುವುದು. ಅವರನ್ನು ಬೆಳೆಸುವುದು(ಬಡತನವನ್ನು) ಅವರ ಪರಮ ಗುರಿ!!?

6:10 PM  
Blogger Kesari said...

ನನ್ನ ಅನಿಸಿಕೆ ಏನೆಂದರೆ- ಅವರ್ಣೀಯರಾದ ದಲಿತರಿಗೆ ಮಾತ್ರ ಜಾತಿ ಆಧಾರದ ಮೇಲೆ ಮೀಸಲಾತಿ ಸಿಗಬೇಕು (Say 23%). ಉಳಿದೆಲ್ಲ ವರ್ಗಗಳಲ್ಲಿ (ಅಂದರೆ ಬ್ರಾಹ್ಮಣರು, ಕ್ಷತ್ರಿಯರು, ಓಬಿಸಿ, ಮುಸಲ್ಮಾನರು, ಕ್ರೈಸ್ತರು) ಕೇವಲ ಆರ್ಥಿಕ ಆಧಾರದ ಮೇಲೆ ಮೀಸಲಾತಿ ಇರಬೇಕು (Say 17%). ಈ ಪದ್ಧತಿಯನ್ನು 2020 ರ ನಂತರ ಹಂತ ಹಂತವಾಗಿ ಕಡಿಮೆ ಮಾಡಿ 2030 ಒಳಗಾಗಿ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಈ ಕೆಲಸ ಮಾಡಲು ವಿಫಲರಾದಲ್ಲಿ ಜವಾಬ್ದಾರರಾದ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು.

12:01 AM  

Post a Comment

<< Home