Monday, November 03, 2008

ಗುರು ಲಂಕೇಶರ ಏಕಲವ್ಯ ಶಿಷ್ಯ

ಪ್ರಕಾಶ್ ರಾಜ್... ಇವರು ಯಾರೆಂದು ನಿಮಗೆ ಗೊತ್ತೆ? ನೆರೆಯ ತಮಿಳು ಮತ್ತು ತೆಲುಗು ಚಿತ್ರರಂಗಗಳ ಪರಿಚಯ ಇಲ್ಲದವರಿಗೆ ಈ ಹೆಸರು ಗೊಂದಲ ಹುಟ್ಟಿಸಬಹುದು, ಯೋಚನೆಗಟ್ಟಬಹುದು. ಈತ ನಮ್ಮದೇ ಕರ್ನಾಟಕದಿಂದ ಕುಡಿಯೊಡೆದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅಪೂರ್ವ ಸ್ಥಾನ ಗಳಿಸಿರುವ ಅಪ್ಪಟ ಕಲಾವಿದ ಪ್ರಕಾಶ್ ರೈ.

ಹಿಂದಿನ ತಲೆಮಾರಿನ ರಂಗ ಕಲಾವಿದರಿಗೆ ಪ್ರಕಾಶ್ ರೈ ಚಿರಪರಿಚಿತ. ಈತನ ಬಗ್ಗೆ ಬಹಳಷ್ಟು ಸ್ವಾರಸ್ಯಕರ ಕತೆಗಳು ಸಿಗುತ್ತವೆ. ನಾಟಕ ಅಭಿನಯದಿಂದ ಹೊಟ್ಟೆಪಾಡು ನೋಡಿಕೊಳ್ಳಬೇಕಾದ ಒಂದು ಪರಿಸ್ಥಿತಿಯಿಂದ ಈಗ ಹಲವು ಮಂದಿ ಕಲಾವಿದರಿಗೆ ದಾರಿದೀಪವಾಗುವಂತಹ ಉನ್ನತ ಸ್ಥಿತಿಗೆ ಬೆಳೆದಿದ್ದಾರೆ. ನಾನು ಚೆನ್ನೈಯಲ್ಲಿದ್ದಾಗ ರೈ ಅವರನ್ನು ಭೇಟಿ ಮಾಡಲು ಸ್ವಲ್ಪ ಪ್ರಯತ್ನಪಟ್ಟೆ. ಆದರೆ ಇವರು ಒಂದೆಡೆ ಹೆಚ್ಚು ಕಾಲ ನಿಲ್ಲುವ ಜಾಯಮಾನದವರಲ್ಲ. ಶೂಟಿಂಗು, ಅದೂ ಇದೂ ಎಂದು ಊರೂರು ಸುತ್ತುತ್ತಲೇ ಇರುತ್ತಾರೆ. ಅಲ್ಲಿ ಇದೆ ನಮ್ಮ ಮನೆ... ಇಲ್ಲಿ ಬಂದೆ ಸುಮ್ಮನೆ ಎಂದು ಹೋದ ಎಡೆಯಲ್ಲೆಲ್ಲಾ ಅವರು ಹೇಳಲಿಕ್ಕೂ ಸಾಕು. ಕೊನೆಗೂ ಪ್ರಕಾಶ್ ರೈ ಭೇಟಿ ಸಾಧ್ಯವಾಗಲೇ ಇಲ್ಲ. ಆದರೆ, ಚೆನ್ನೈ ಬಿಡುವ ಕೆಲ ದಿನಗಳ ಹಿಂದೆ "ಸೊಲ್ಲಾದದುಮ್ ಉಣ್ಮೈ" ಎಂಬ ತಮಿಳು ಪುಸ್ತಕ ಕಣ್ಣಿಗೆ ಬಿತ್ತು. ಆನಂದ ವಿಗಡನ್ ಎಂಬ ತಮಿಳು ವಾರ ಪತ್ರಿಕೆಗೆ ಅವರು ಹೇಳಿ ಬರೆಸಿದ ಲೇಖನಗಳ ಸಂಗ್ರಹ ಇದು. ಇದರ ಬರಹಗಳ ಶೈಲಿ ಆಡುಮಾತಿನ ಹಾಗೆ ಇದ್ದುದ್ದರಿಂದ ನನ್ನಂಥವನಿಗೆ ಓದುವುದು ಸುಲಭವಾಯಿತು.

ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವ ಎಂಬುದರಲ್ಲಿ ಸಂಶಯವಿಲ್ಲ. ಸಣ್ಣ ವಯಸ್ಸಿನಿಂದಲೇ ಮಕ್ಕಳನ್ನು ತಿದ್ದಿ ತೀಡಿ ಒಂದು ಸುಂದರ ಕಲಾಕೃತಿ ಹೊಮ್ಮುವಂತೆ ಅವರನ್ನು ಬೆಳೆಸುವುದು ಗುರುವೇ. ಈ ವಿಷಯದ ಬಗ್ಗೆ ಪ್ರಕಾಶ್ ರೈ ತಮ್ಮೊಂದು ಲೇಖನದಲ್ಲಿ ಮನದುಂಬಿ ಮಾತಾಡಿದ್ದಾರೆ. ತಮ್ಮ ಹಿಂದಿನ ಜೀವನದ ಸ್ಮರಣೆ ಮಾಡಿದ್ದಾರೆ. ದಿವಂಗತ ಲಂಕೇಶ್ ಬಗ್ಗೆ ಅವರ ಅನಿಸಿಕೆಗಳು ಮನಸಿಗೆ ನಾಟಿದವು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಾಶ್ ರೈ ಕೆಲಕಾಲ ಇದ್ದುದ್ದರಿಂದ ಮತ್ತಷ್ಟು ಕುತೂಹಲ ಮೂಡಿಸಿತು. ಬೆಂಗಳೂರಿಗೆ ಬಂದ ಕೂಡಲೇ ಅನುವಾದ ಮಾಡಿ ಸಿದ್ಧಮಾಡಿಟ್ಟುಕೊಂಡೆ. ಟೀಚರ್ಸ್ ಡೇ ಸಮಯದಲ್ಲಿ ಇದನ್ನು ಪ್ರಕಟಿಸುವ ಇರಾದೆ ಇತ್ತು. ಆದರೆ ಆ ದಿನ ಬಂದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ. ಆದರೂ ಲಂಕೇಶ್ ಬಗ್ಗೆ ಪ್ರಕಾಶ್ ರೈ ಅವರ ನೆನಹುಗಳು ಚಿರಸ್ಥಾಯಿಯಾಗೇ ಉಳಿಯಬಲ್ಲವಾದ್ದರಿಂದ ನನ್ನ ಜಡ ಹಿಡಿದ ಬ್ಲಾಗಿಗೆ ಚೈತನ್ಯ ನೀಡಲು ಈ ಲೇಖನ ಹಾಕಲು ನಿರ್ಧರಿಸಿದೆ... ಯಾರಾದರೂ ಇಲ್ಲಿಗೆ ಇಣುಕಿದ್ದರೆ ದಯವಿಟ್ಟು ಪೂರ್ತಿಯಾಗಿ ಓದಿ...

------

ಪ್ರಪಂಚದಲ್ಲಿ ಅರ್ಜುನರುಗಳೇ ಅಪೂರ್ವ! ಯೋಗ್ಯರಾದ ಒಬ್ಬ ಗುರು ಸಿಗಬಹುದು; ಅವರಿಗೆ ಕೈತುಂಬಾ ದಕ್ಷಿಣೆ ನೀಡಬಹುದು; ಬೇಕಾದ ವಿದ್ಯೆಯಷ್ಟನ್ನೇ ಕಲಿಯಬಹುದು. ಆದರೂ "ಗುರುವನ್ನೇ ಮೀರಿಸುವ ಶಿಷ್ಯ" ಎಂದು ಹೆಸರು ಗಳಿಸುವುದು ದೊಡ್ಡ ವಿಷಯವೇ. ಆ ರೀತಿಯವನು ಸಾವಿರಕ್ಕೊಬ್ಬ ಸಿಗುವುದೂ ಕಷ್ಟವೇ.

ಒಬ್ಬ ಗುರು ಹಲವು ರೀತಿಯ ಪರೀಕ್ಷೆಗಳನ್ನೊಡ್ಡಿ ಸಮರ್ಥನಾದ ಒಬ್ಬನನ್ನು ಆಯ್ಕೆಮಾಡಿ "ಇಂತಹವರೇ ನನ್ನ ಗುರು" ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಹುಡುಕಿ ಹೇಳಿಕೊಳ್ಳುವುದು ನಿಜಕ್ಕೂ ತುಂಬಾ ದೊಡ್ಡ ಸಂಗತಿ.

ಏಕಲವ್ಯನಂತೆ ಮಾನಸಿಕವಾಗಿ ತನಗಾಗಿ ಗುರುವನ್ನು ಹುಡುಕಿಕೊಂಡು ಸ್ವಯಂ ಕಲಿತುಕೊಳ್ಳುವ ಶಿಷ್ಯನಿಗಿಂತ, ಅಂತಹ ಶಿಷ್ಯನಿಂದ ಸ್ವೀಕರಿಸಲ್ಪಟ್ಟ ಗುರುವಿಗೇ ಹೆಚ್ಚು ಶ್ರೇಯಸ್ಸು. ಏಕೆಂದರೆ, ಅದೇ ಅವರು ನಡೆಸಿದ ಜೀವನ! ಅರ್ಜುನನನ್ನು ಶಿಷ್ಯನನ್ನಾಗಿಸಿಕೊಂಡ ಗುರು ದ್ರೋಣ ತಮಗೆ ಗೊತ್ತಿರುವಷ್ಟನ್ನು ಮಾತ್ರ ಕಲಿಸಿಕೊಡಲು ಸಾಧ್ಯ. ಆದರೆ, ಏಕಲವ್ಯನಂತಹವರು ಎಲ್ಲಿಯೋ ದೂರದಲ್ಲಿದ್ದುಕೊಂಡು ತಾವು ಸ್ವೀಕರಿಸಿದ ಗುರುವಿನ ಜೀವನವನ್ನು ನೋಡಿಕೊಂಡೇ ಅಪಾರ ವಿಷಯ ಕಲಿಯುತ್ತಾರೆ.

ಏಕಲವ್ಯರುಗಳಿಗೆ ಯಾವುದನ್ನು ಯಾರೂ ಹೇಳಿಕೊಡುವುದಿಲ್ಲ. ಅವರವರೇ ಸ್ವತಃ ಎಲ್ಲವನ್ನೂ ಕಲಿಯುತ್ತಾರೆ. ಅವರಿಗೆ ಒಳ್ಳೆಯ "ರೋಲ್ ಮಾಡಲ್" ಸಿಕ್ಕಿದರೆ ಸಾಕು! ಗುರುವಿನ ಬಾಳಿಗೆ ಅರ್ಥ ಸಿಗುವುದು ಏಕಲವ್ಯರಂಥವರು ಇದ್ದಾಗ. ಇಂತಹ ವಿದ್ಯಾರ್ಥಿಯಿಂದ ಕಾಣಿಕೆಯಾಗಿ "ಹೆಬ್ಬೆರಳು" ಕೇಳುವ ಗುರುಗಳು ಎಷ್ಟು ದೊಡ್ಡ ಪಂಡಿತರಾದರೂ ಸಣ್ಣ ಮನುಷ್ಯರಾಗಿಬಿಡುತ್ತಾರೆ!

ಲಂಕೇಶ್... ನನ್ನ ಜೀವನದಲ್ಲಿ ನಾನು ಮರೆಯಲು ಸಾಧ್ಯವಿರದ ಒಬ್ಬ ಮನುಷ್ಯ. ನನ್ನ ಮಾನಸಿಕ ಗುರು. ಈಗ ಅವರು ಬದುಕಿಲ್ಲ. ತಮ್ಮ ಸಾಮರ್ಥ್ಯ, ಅರ್ಹತೆ, ಗುಣದಿಂದ ನನ್ನಂತಹ ಯುವ ಜನಾಂಗಕ್ಕೆ ಆದರ್ಶವಾಗಿ ಬದುಕಿದವರು. "ಜನರ ವಿಷಯದಲ್ಲಿ ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ನಿನ್ನನ್ನು ಹೇಗೆ ಮುಖ್ಯಮಂತ್ರಿಯಾಗಿ ಸ್ವೀಕರಿಸಲು ಸಾಧ್ಯ? ನಿಜ ಹೇಳಬೇಕೆಂದರೆ 'ನೀನು ಒಬ್ಬ ಮೂರ್ಖ' ಎಂದು ಮುಖ್ಯಮಂತ್ರಿಯ ಬಗ್ಗೆಯೇ ಬಹಿರಂಗವಾಗಿ ಬರೆಯುವ ಪತ್ರಿಕೆಯೊಂದರ ಸಂಸ್ಥಾಪಕರು (ಕನ್ನಡದಲ್ಲಿ ಇವತ್ತಿಗೂ ಪ್ರಕಟವಾಗುತ್ತಿರುವ ಪತ್ರಿಕೆ ಲಂಕೇಶ್). ತಮಿಳು ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ, ಕನ್ನಡ ನಾಟಕ ಮತ್ತು ಪತ್ರಿಕೆಯ ಕ್ಷೇತ್ರಗಳಲ್ಲಿ ಅವರು ನಮಗೆ ಜಯಕಾಂತನ್‌ರಂತೆ.

ಅವರ ನಾಟಕಗಳಲ್ಲಿ ನಾನು ನಟಿಸಿದ್ದೇನೆ. ಅವರ ಪತ್ರಿಕೆಯಲ್ಲಿ ಪತ್ರಕರ್ತನಾಗಿ ದುಡಿದಿದ್ದೇನೆ. ಆಗ ಕಲಿತ ಹಲವು ವಿಷಯಗಳು ಈಗಲೂ ನನ್ನ ನೆರಳಿನಂತೆ ಜೊತೆಯಲ್ಲಿಯೇ ಬರುತ್ತವೆ... "ಇವತ್ತು ನೀನು ನಟಿಸಿದ್ದಕ್ಕೆ ನಟನೆ ಎಂದು ಕರೆಯುತ್ತಾರಾ? ಮನೆಗೆ ನಡೆದೇ ಹೋಗು! ಹಾಗಾದಾಗಲೇ ನಿನಗೆ ಬುದ್ಧಿ ಬರುತ್ತದೆ" ಎಂದು ಅವರು ಅರ್ಧ ದಾರಿಯಲ್ಲೇ ಕಾಲಿನಿಂದ ಕೆಳಗಿಳಿಸಿಬಿಡುತ್ತಿದ್ದರು. "ನನ್ನನ್ನು ಯಾವಾಗಲೂ ಬಯ್ಯುತ್ತಲೇ ಇರುತ್ತೀರಲ್ಲ ಯಾಕೆ?" ಎಂದು ಕೇಳಿದರೆ, "ಬಯ್ದು ಬಯ್ದು ಮಾಡಿದರೆ ಮಾತ್ರ ನಿನ್ನನ್ನು ತಿದ್ದಲು ಸಾಧ್ಯ. ಇಲ್ಲದಿದ್ದರೆ, ನಿನ್ನ ಅಹಂಕಾರ ನಿನಗೆ ಬಲ ನೀಡುವುದರ ಬದಲು ಅದೇ ನಿನ್ನನ್ನು ಬಲಹೀನನನ್ನಾಗಿ ಮಾಡಿಬಿಡುತ್ತದೆ" ಎಂದು ಹೇಳುತ್ತಾರೆ.

"ನೀನು ಯಾವುದನ್ನೂ ಕಲಿತುಕೊಳ್ಳುವ ಹಾಗೆ ತೋರುತ್ತಿಲ್ಲ! ಓಸಿಯಲ್ಲಿ ಗುಂಡು ಹೊಡೆಯಲೆಂದು ಹೀಗೆ ನನ್ನ ಜೊತೆ ತಿರುಗಾಡುತ್ತೀಯಾ ಅಲ್ಲವಾ?" ಎಂದು ಅವರು ನನ್ನನ್ನು ಅವಮಾನ ಮಾಡಿದಾಗ, ನಾನು ಮರುದಿನವೇ ನನ್ನ ಕಾಸಲ್ಲೇ ಬಾಟಲ್ ಕೊಂಡುಕೊಂಡು ಅವರ ಮುಂದೆ ಕುಡಿದಿದ್ದೇನೆ. "ಈ ಅಹಂಕಾರವೇ ನಿನಗೆ ಆಸ್ತಿ ಕಣೋ" ಎಂದು ಲಂಕೇಶ್ ಸಂತೋಷದಿಂದ ನಗುತ್ತಾರೆ.

"ಪತ್ರಕರ್ತನು ಯಾವಾಗಲೂ ಪ್ರತಿಪಕ್ಷದವೇ. ಎಂತಹ ಸಂದರ್ಭದಲ್ಲೂ ಅವನು ಆಡಳಿತ ಪಕ್ಷದ ಪರ ಆಗಲು ಸಾಧ್ಯವಿಲ್ಲ. ಅಂಥ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾದರೆ ಪತ್ರಿಕೆಯಲ್ಲಿ ಬರೆಯಲು ಬಾ" ಎಂದು ಪ್ರತಿಯೊಂದು ಸಂದರ್ಭದಲ್ಲೂ ಹೇಳುತ್ತಲೇ ಇರುತ್ತಾರೆ. "ಒಬ್ಬ ವರದಿಗಾರನಾದವನು ಅವನ ವಿಚಾರವನ್ನು ಬರೆಯಬೇಕು. ಇವತ್ತು ಸಂಪಾದಕರನ್ನು ತೃಪ್ತಿಪಡಿಸುವ ರೀತಿಯಲ್ಲಿ ಬರೆಯಲು ಮುಂದಾದನೆಂದರೆ ನಾಳೆ ಒಬ್ಬ ಎಂಎಲ್ಎಯನ್ನು ಸಂತೋಷಪಡಿಸಲು ಬರೆದಿದ್ದಾನೆ ಎಂದನಿಸುತ್ತದೆ. ಅವನವನ ಸ್ವಾತಂತ್ರ್ಯಕ್ಕೆ ಅಡ್ಡಿ ಬರದಂತೆ ಕೆಲಸ ಮಾಡಲು ಬಿಡಿ" ಎಂದು ಅವರು ನನಗಿಂತ ಸೀನಿಯರ್ ಆದ ಪತ್ರಕರ್ತರನ್ನು ಕರೆದುಹೇಳುತ್ತಾರೆ.

"ಜಯಿಸಿದವನನ್ನೇ ಮತ್ತೆ ಮತ್ತೆ ಇಟ್ಟುಕೊಂಡು ಮೆರೆಸುವುದು ಅನಾಗರಿಕ. ಅವಕಾಶ ಇಲ್ಲದೆ ತಹತಹಿಸುತ್ತಿರುವ ಹೊಸ ಪ್ರತಿಭೆಗಳನ್ನು ಹುಡುಕಿ ಅವರು ಬೆಳೆಯಲು ಬಿಡಬೇಕು. ಜಯಿಸಿದವನೊಬ್ಬನ ಕೃಪೆಯಲ್ಲಿ ನಾನೂ ಜಯಿಸಬಹುದೆಂದು ಒಬ್ಬ ಕಲಾವಿದ ಯಾವಾಗ ಯೋಚಿಸಲು ಆರಂಭಿಸುತ್ತಾನೋ ಆಗಲೇ ಅವನೊಳಗಿನ ಕಲೆಯು ಸಾಯಲು ಆರಂಭಿಸುತ್ತದೆ" ಎಂದು ಹೇಳುತ್ತಾರೆ.

"ಲಂಕೇಶ್‌ರಿಗೆ ಕಾಸು ಕೊಡುವ ಒಂದು ಪ್ರಯತ್ನ ನಡೆಸಿದರೂ ಅವರಿಗೆ ನಾವು ಖಾಯಂ ವೈರಿಗಳಾಗಿಬಿಡುತ್ತೇವೆ" ಎಂದು ಲಂಚ ಕೊಡಲು ಯೋಚಿಸುತ್ತಿರುವವರೂ ಕೂಡ ಭಯಪಟ್ಟು ಸುಮ್ಮನಾಗುತ್ತಿದ್ದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಬೆಂಕಿಯಂತೆ ಬಾಳಿದ ಪತ್ರಕರ್ತ ಬರಹಗಾರ!

ಲಂಕೇಶ್ ಬರೆದ ಒಂದು ನಾಟಕವನ್ನು ರಂಗದ ಮೇಲೆ ತರಲು ಒಂದು ದೊಡ್ಡ ನಾಟಕ ತಂಡ ಮುಂದೆ ಬಂದಿತ್ತು. ಆಗ ಲಂಕೇಶರು "ನನ್ನ ಕೃತಿಯನ್ನು ರಂಗಕ್ಕೆ ತರುವ ಅರ್ಹತೆ ನಿಮಗೆ ಇಲ್ಲ. ನಿಮ್ಮ ಶಕ್ತಿ ನನಗೆ ಲಾಭವೇನೋ ತರುತ್ತದೆ. ಆದರೆ, ಒಂದು ಚಿಕ್ಕ ತಂಡಕ್ಕೆ ನನ್ನ ಕೃತಿ ಕೈಸೇರಿದಾಗ ಅದು ಅವರಿಗೆ ಶಕ್ತಿಯಾಗಿರುತ್ತದೆ. ನನ್ನ ಸ್ಕ್ರಿಪ್ಟನ್ನು ರಂಗಕ್ಕೆ ಅಳವಡಿಸಲು ನಿಮ್ಮ ಅವಶ್ಯಕತೆ ಇಲ್ಲ" ಎಂದು ಅವರನ್ನು ವಾಪಸ್ಸು ಕಳುಹಿಸಿ, ಖ್ಯಾತವಲ್ಲದ ಒಂದು ತಂಡಕ್ಕೆ ಆ ಅವಕಾಶ ನೀಡುತ್ತಾರೆ. "ಒಳ್ಳೆಯ ಊಟ ಮಾಡುತ್ತೇನೆ. ಒಳ್ಳೆಯ ಬಟ್ಟೆ ತೊಡುತ್ತೇನೆ. ಒಳ್ಳೆಯ ಮನೆಯಲ್ಲಿ ವಾಸಿಸುತ್ತೇನೆ. ದಿನವೂ ಗುಂಡು ಹಾಕುತ್ತೇನೆ. ಮನಸ್ಸನ್ನಾವರಿಸಿದ ವಿಷಯವನ್ನು ಧೈರ್ಯವಾಗಿ, ನೇರವಾಗಿ ಬರೆಯುತ್ತೇನೆ. ಆ ರೀತಿ ಒರಟೊರಟಾಗಿ ಬಾಳಿದ್ದರಿಂದ ನನಗೆ ಎಂಥ ನಷ್ಟ ಬಂದಿತು?" ಎಂದು ಅವರು ತಮ್ಮ ಟೀಕಾಕಾರರನ್ನು ಕಂಡು ಮನಸು ಬಿಚ್ಚಿ ಕೇಳುತ್ತಾರೆ. "ಹೀಗೇ ಇರಬೇಕು" ಎಂದು ಅವರು ನಮಗೆ ಹೇಳುತ್ತಲೇ ಇಲ್ಲ. ಹೀಗೇ ಇರಬೇಕು ಎಂಬುದಕ್ಕೆ ಅವರೇ ಒಂದು "ರೋಲ್ ಮಾಡಲ್" ಆಗಿ ಬಾಳಿ ತೋರಿಸಿದ್ದಾರೆ.

ಲಂಕೇಶರನ್ನು ಮಾನಸಿಕವಾಗಿ ಸ್ವೀಕರಿಸಿದ ಎಷ್ಟೋ ಮಂದಿ ಏಕಲವ್ಯರು ಇದ್ದಾರೆ. ಅವರಲ್ಲಿ ನಾನೂ ಒಬ್ಬ ಏಕಲವ್ಯ!

ಈಗ ಇದೆಲ್ಲವನ್ನೂ ನಾನು ಏಕೆ ಹೇಳುತ್ತಿದ್ದೇನೆಂದು ಯೋಚಿಸುತ್ತಿರುವಿರಲ್ಲವೇ? ಈಗ ಪರೀಕ್ಷೆ ಸೀಸನ್. ನನ್ನ ಆತ್ಮೀಯನೊಬ್ಬನ ಪತ್ನಿ ಒಬ್ಬ ಟೀಚರ್. ಅವರ ಮನೆಗೆ ಹೋಗಿದ್ದೆ. ಮನೆಯಲ್ಲಿ ಆಕೆ ತನ್ನ ಮಗನಿಗೆ ಕೋಚಿಂಗ್ ನೀಡುತ್ತಿದ್ದರು. "ಇವತ್ತು ಸ್ಕೂಲ್ ಇಲ್ವಾ?" ಎಂದು ಕೇಳಿದೆ. "ಮೆಡಿಕಲ್ ಲೀವ್ ಹಾಕಿದ್ದೇನೆ. ಮಗನಿಗೆ ಪಾಠ ಹೇಳಿಕೊಡಬೇಕಾಗಿತ್ತು" ಎಂದರು. "ಅಂದ್ರೆ, ನಿಮ್ಮಲ್ಲಿ ಓದುತ್ತಿರುವ ಮಕ್ಕಳ ಗತಿ?" ಎಂದು ನಗುತ್ತಲೇ ಸೀರಿಯಸ್ಸಾಗಿ ಕೇಳಿದೆ. ಇದಕ್ಕೆ ಆಕೆ ನೀಡಿದ ಉತ್ತರ 'ಶಾಕ್' ನೀಡುವಂತಿತ್ತು... "ಅದಕ್ಕೇನ್ಮಾಡೋದು? ನಾನು ಮಾತ್ರನಾ ಹೀಗೆ ಲೀವ್ ಹಾಕೋದು?"

ನಮ್ಮ ನಾಡಿನ ಸಮಸ್ಯೆಗಳಲ್ಲಿ ಮುಖ್ಯವಾದ ಸಮಸ್ಯೆ ಇದೆಯೇ... ಸ್ವಾರ್ಥವಿಲ್ಲದ ರೋಲ್ ಮಾಡಲ್ ಟೀಚರುಗಳು ಅಗತ್ಯವಿದೆ. ಅದಕ್ಕೆ ಏನು ಮಾಡಬೇಕೋ ಗೊತ್ತಿಲ್ಲ.

Labels: ,

Friday, January 25, 2008

ಲಿಂಗುಸ್ವಾಮಿಯ ಭೀಮನೂ ಭಟ್ಟರ ಗಾಳಿಪಟವೂ...

ನಮ್ಮ ಹಲವಾರು ಮಂದಿಯ ಬಹುನಿರೀಕ್ಷೆಯ ಚಿತ್ರ 'ಗಾಳಿಪಟ'. ಭರ್ಜರಿ ಯಶಸ್ವಿ 'ಮುಂಗಾರು ಮಳೆ' ಚಿತ್ರದ ರೂವಾರಿಗಳಾದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಆ ಚಿತ್ರದ ಹೀರೋ ಗಣೇಶ್ ಮತ್ತೊಮ್ಮೆ ಬೆರೆತ ಚಿತ್ರ ಗಾಳಿಪಟ. ಅದರ ನಿರ್ಮಾಪಕರು ತಮಿಳಿನ ಘಟಾನುಘಟಿ ಎ.ಎಂ.ರತ್ನಂ. ಚಿತ್ರ ಪೂರ ಮಲೆನಾಡಿನ ನಿಸರ್ಗ ಸೌಂದರ್ಯದ ರಮಣೀಯ ಹಿನ್ನೆಲೆ. ಇಷ್ಟು ಸಾಕಲ್ಲವೇ ಒಂದು ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಳ್ಳಲು?

ಚೆನ್ನೈನಲ್ಲಿರುವ ನಮಗೆ 'ಗಾಳಿಪಟ' ಮೊದಲ ಬಾರಿಗೇ ನಿರಾಸೆ ತಂದಿತ್ತು. ಇಲ್ಲಿನ ಕ್ಯಾಸಿನೋ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆಂದು ಮೂರು ವಾರಗಳ ಹಿಂದಿನಿಂದಲೇ ಪೇಪರಿನಲ್ಲಿ ಜಾಹೀರಾತು ಬರುತ್ತಿತ್ತು. ಬಿಡುಗಡೆ ದಿನ ಬಂದರೂ ಚೆನ್ನೈನಲ್ಲಿ ಎಲ್ಲಿಯೂ 'ಗಾಳಿಪಟ' ಹಾರಾಡಲಿಲ್ಲ. ಅಂತೂ ಬೆಂಗಳೂರಿಗೇ ದೌಡಾಯಿಸಿ ಚಿತ್ರವನ್ನು ನೋಡಬೇಕಾಯಿತು. ಚಿತ್ರಮಂದಿರದೊಳಗೆ ಆಗುತ್ತಿದ್ದ ಪ್ರೇಕ್ಷಕರ ಕಲರವ, ಉತ್ಸಾಹಗಳನ್ನು ಕಂಡು ಮನಸಿನೊಳಗೆ ಚಿತ್ರದ ಬಗ್ಗೆ ನೂರಾರು ಗಾಳಿಪಟಗಳು ಹಾರತೊಡಗಿದ್ದವು. ಚಿತ್ರ ಆರಂಭಗೊಂಡು ಒಂದೊಂದೇ ಸನ್ನಿವೇಶಗಳು ಸಂದುಹೋಗುತ್ತಿರುವಂತೆಯೇ ಮನಸಿನೊಳಗೆ ಹಾರಾಡುತ್ತಿದ್ದ ಗಾಳಿಪಟಗಳು ಒಂದೊಂದಾಗಿ ಕಿತ್ತುಹೋಗಿ ಶೂನ್ಯ ಸೇರಿಕೊಂಡವು. ಯೋಗರಾಜ್ ಭಟ್ಟರು 'ಮುಂಗಾರು ಮಳೆ' ಪ್ರಭಾ ವಲಯದಿಂದ ಹೊರಬರದೆ ಗಾಳಿಪಟ ಹಾರಿಸಿದರೆಯೇ? ಅಥವಾ ನನ್ನಂತಹ ಜನರು 'ಮುಂಗಾರು ಮಳೆ' ಯನ್ನು ಮನಸ್ಸಿನಿಂದ ಕಿತ್ತುಹಾಕದೆ ಗಾಳಿಪಟ ನೋಡಿದೆವೆಯೇ? ಆ 'ಮುಂಗಾರು ಮಳೆ' ಯಲ್ಲಿ ಸುರಿದಿದ್ದ ಸಂಭಾಷಣೆಗಳ ಮಳೆಯು ಹಿತಕರವಾಗಿದ್ದರೆ, 'ಗಾಳಿಪಟ'ದಲ್ಲಿ ಆಡಿಸಿದ್ದ ಸಂಭಾಷಣೆಗಳು ಶೀತ, ನೆಗಡಿ ತಂದವು.

ಯೋಗರಾಜ್ ಭಟ್ಟರಿಗೆ ಏನಾಯಿತು? 'ಮುಂಗಾರು ಮಳೆ' ಚಿತ್ರದ ಅಪೂರ್ವ ಗೆಲುವಿಗೆ ಯಾವ ಅಂಶ ಕಾರಣವಾಯಿತು ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲವೆಂದು ಯೋಗರಾಜ್ ಭಟ್ಟರು ಒಮ್ಮೆ ಹೇಳಿದ್ದರು. ಅದೇ ಗೊಂದಲ, ಜಿಜ್ಞಾಸೆಯಲ್ಲಿ ಭಟ್ಟರು ಆ ಚಿತ್ರದ ಯಶಸ್ವಿಗೆ ಯಾವ್ಯಾವ ಅಂಶಗಳು ಕಾರಣವಾದವೋ ಅವನ್ನೆಲ್ಲಾ ಗಾಳಿಪಟಕ್ಕೆ ಬಲವಂತವಾಗಿ ತೂರಿದಂತೆ ಕಾಣುತ್ತದೆ. ಮುಂಮಳೆಯಲ್ಲಿ ಸಂಭಾಷಣೆಗಳು ಸಾಂದರ್ಭಿಕವಾಗಿ ತಕ್ಕುವಾಗಿದ್ದು ಅದರ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಅಂಶ ಅರಿತ ಯೋಗರಾಜ್ ಭಟ್ಟರು ಗಾಳಿಪಟಕ್ಕೆ ಸಂಭಾಷಣೆಗಳ ಮಳೆಯನ್ನೇ ಸುರಿಸುತ್ತಾರೆ. 'ಮುಂಮ'ದ ಸಂಭಾಷಣೆಗಳನ್ನೇ ಜಗ್ಗಿ ಜಗ್ಗಿ ಎಳೆದು ಗಾಳಿಪಟದ ಸೂತ್ರ ಕಿತ್ತುಬರುವಂತೆ ಮಾಡುತ್ತಾರೆ. ಅಲ್ಲಿಯೇ ಗಾಳಿಪಟ ಗೋತಾ ಹೊಡೆಯಲು ಆರಂಭವಾಗುವುದು. ಡಯಲಾಗ್‌ಗಳನ್ನು ಎಷ್ಟು ಬೇಕೊ ಅಷ್ಟು ಇಟ್ಟುಕೊಂಡಿದ್ದರೆ ಬಹುಶಃ ಗಾಳಿಪಟ ಒಂದು ಪಕ್ಕಾ ಮಕ್ಕಳ ಆಟವಾಗುತ್ತಿತ್ತೇನೊ (ಅಂದರೆ ಮನರಂಜಕವಾಗುತ್ತಿತ್ತು).

'ರಂಗ ಎಸ್ಎಸ್ಎಲ್‌ಸಿ' ಮತ್ತು 'ಮಣಿ' ಚಿತ್ರಗಳೆರಡು ಚೆನ್ನಾಗಿದ್ದೂ ನೆಲಕಚ್ಚಿದಾಗ ನಾನು ಭಯದಿಂದಲೇ 'ಮುಂಗಾರು ಮಳೆ' ಮಾಡಿದೆ. ಅದೇನೋ ಯಶಸ್ವಿಯಾಯಿತು. ಈಗ ಆ ಯಶಸ್ವಿಯನ್ನು ಬೆನ್ನಿಗೆ ಹಾಕಿಕೊಂಡು ಭಯದಿಂದಲೇ 'ಗಾಳಿಪಟ' ಮಾಡಿದ್ದೇನೆ ಎಂದು ಯೋಗರಾಜ್ ಭಟ್ಟರು ಗಾಳಿಪಟ ಹಾರಿಸುವ ಮುನ್ನ ಹೇಳಿಕೊಂಡಿದ್ದರು. ಗಾಳಿಪಟ ಗೋತಾ ಹೊಡೆಯಲು ಈ ಭಯವೇ ಕಾರಣವಾಯಿತೆ? ಈ ಭಯ ಎಂಬ ಪದ ಕೇಳಿದಾಗ ನನಗೆ ತಮಿಳಿನ ಲಿಂಗುಸ್ವಾಮಿ ಎಂಬ ನಿರ್ದೇಶಕ ನೆನಪಿಗೆ ಬರುತ್ತಾರೆ.

'ಗಾಳಿಪಟ' ಚಿತ್ರದ ನಿರ್ಮಾಪಕರೇ ಆದ ಎ.ಎಂ.ರತ್ನಂ ಅವರ ನಿರ್ಮಾಣದಲ್ಲಿ ವಿಕ್ರಮ್ ಎಂಬ ದೊಡ್ಡ ನಾಯಕನಟನಿರುವ 'ಭೀಮಾ' ಎಂಬ ಚಿತ್ರದ ನಿರ್ದೇಶಕ ಈ ಲಿಂಗುಸ್ವಾಮಿ. 'ಸಂಡೈಕೋಳಿ' ಯಂತಹ ಕೆಲವು ಅಮೋಘ ಚಿತ್ರಗಳನ್ನು ನಿರ್ದೇಶಿಸಿದ ಅಪ್ರತಿಮ ಪ್ರತಿಭಾವಂತ ನಿರ್ದೇಶಕ, ಸಂಭಾಷಣೆಕಾರ. ಇಂತಹ ವ್ಯಕ್ತಿಯು ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಯದ ಬಗ್ಗೆ ಪ್ರಸ್ತಾಪ ನಡೆಸಿದರು. 'ಭೀಮಾ' ಚಿತ್ರ ನಿರ್ಮಾಣವಾಗಲು ತಗುಲಿದ ಸುಮಾರು ಒಂದೂವರೆ ವರ್ಷಗಳಲ್ಲಿ ಪ್ರತಿಯೊಂದು ದಿನವನ್ನೂ ನಾನು ಭಯದಲ್ಲೇ ಕಳೆಯುತ್ತಿದ್ದೆ. ಕುಂತರೂ, ನಿಂತರೂ ನನಗೆ ಭೀಮನೇ ಕಣ್ಣಿಗೆ ಬರುತ್ತಿತ್ತು. ನೆಂಟರ ಮನೆಗಳಿಗೆ ಹೋಗಿ ಸಮಯ ಸವೆಸಿದರೆ ನಾನೆಲ್ಲಿ ಭೀಮನಿಗೆ ಅನ್ಯಾಯ ಮಾಡುತ್ತಿದ್ದೇನೆಯೋ ಎಂಬಂತಹ ಭಯದ ಭಾವನೆಗಳು ಉಂಟಾಗುತ್ತಿದ್ದುವು ಎಂದು ಲಿಂಗುಸ್ವಾಮಿ ಮನಸ್ಸು ಬಿಚ್ಚಿಕೊಂಡಿದ್ದರು. ಅಂತಹ 'ಭೀಮಾ' ಚಿತ್ರ ಇದೀಗ ಸಂಕ್ರಾಂತಿಯಲ್ಲಿ (ಅಂದರೆ ಪೊಂಗಲ್) ಬಿಡುಗಡೆಯಾಯಿತು. ವಿಶಿಷ್ಟ ಕಥಾವಸ್ತು, ವೇಗಭರಿತ ನಿರೂಪಣೆಯ ಚಾಕಚಕ್ಯತೆ ಹೊಂದಿರುವ ಪಕ್ಕಾ ಕಮರ್ಷಿಯಲ್ ನಿರ್ದೇಶಕ ಲಿಂಗುಸ್ವಾಮಿ ಅವರು 'ಭೀಮಾ' ಚಿತ್ರದಲ್ಲಿ ಎಡವಿದರು. ಯೋಗರಾಜ್ ಭಟ್ಟರು 'ಗಾಳಿಪಟ'ದಲ್ಲಿ ಸಂಭಾಷಣೆಗಳ ಬಾಲ ಹಿಡಿದರೆ, ಲಿಂಗುಸ್ವಾಮಿಯವರು 'ಭೀಮಾ'ದಲ್ಲಿ ಹೊಡೆದಾಟಗಳ ಹಾದಿಹಿಡಿದರು. ಹೀಗಾಗಿ ಸಂಭಾಷಣೆಗಳಿಂದಾಗಿ ಗಾಳಿಪಟದ ಬಾಲಂಗೋಚಿ ಕಿತ್ತುಹೋಯಿತು; ಹೊಡೆದಾಟಗಳಿಂದಾಗಿ ಭೀಮಾ ಶಕ್ತಿ ಕುಂದಿಹೋಯಿತು. ಹಾಗಿದ್ದರೆ ಯೋಗರಾಜ್ ಭಟ್ಟರು ಮತ್ತು ಲಿಂಗುಸ್ವಾಮಿಯವರು ಸೋಲಲು ಕಾರಣ ಅವರ ಮನಸ್ಸಿನೊಳಗೆ ಆವರಿಸಿದ್ದ ಭಯವೇ?

ತುಣುಕು ಅನುಮಾನ: ಯೋಗರಾಜ್ ಭಟ್ಟರು ಮತ್ತೊಬ್ಬ ಉಪೇಂದ್ರ ಆಗಲಿದ್ದಾರೆಯೇ? ಉಪೇಂದ್ರ ಅವರು 'ಶ್', 'ಓಂ' ಮತ್ತು 'ಎ' ಚಿತ್ರಗಳನ್ನು ನಿರ್ದೇಶಿಸಿದಾಗ ಅವರೊಬ್ಬ ವಿಶಿಷ್ಟ ಹಾಗೂ ಸೃಜನಶೀಲ ನಿರ್ದೇಶಕ ಎಂದು ಹೆಸರು ಪಡೆದರು. ಆನಂತರ 'ಉಪೇಂದ್ರ' ಚಿತ್ರ ಮಾಡಿದರು. ಚಿತ್ರವೇನೋ ಭರ್ಜರಿ ಯಶಸ್ವಿಯಾಯಿತಾದರೂ ಎಲ್ಲೋ ಒಂದು ಕಡೆ ಉಪೇಂದ್ರರವರು ಸೃಜನಶೀಲತೆ ಕಳೆದುಕೊಂಡರೇನೋ ಎಂಬಂತೆ ಭಾಸವಾಯಿತು. 'ಆಪರೇಷನ್ ಅಂತ' ಬಂದ ನಂತರ ಇದು ಬಹುತೇಕ ಖಚಿತವಾಯಿತು. ಈಗ ಉಪೇಂದ್ರ ಅವರು ನಿರ್ದೇಶನದ ಗೊಡವೆಯೇ ಬಿಟ್ಟು ಮೈ ಬೆಳೆಸಿಕೊಂಡು ಹೀರೋ ಆಗಿಬಿಟ್ಟಿದ್ದಾರೆ. ಯೋಗರಾಜ್ ಭಟ್ಟರು ಉಪೇಂದ್ರರಂತೆಯೇ ಎಲ್ಲೋ ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೇನೋ ಎಂಬ ಸಣ್ಣ ಭಯ ನಮಗೆ ಕಾಡುತ್ತದೆ.

Labels: ,

Friday, January 18, 2008

ಚೆನ್ನೈ ಸಂಗಮಮ್ - ಒಂದು ವಿಹಂಗಮ

ಜಾನಪದ ನೃತ್ಯಪಟುಗಳು, ಶಾಸ್ತ್ರೀಯ ಸಂಗೀತಗಾರರು, ಸಂಗೀತ ವಾದಕರು ಸೇರಿದಂತೆ ಸಾವಿರಾರು ಕಲಾವಿದರು ನಗರದಲ್ಲಿ ಏಕಕಾಲಕ್ಕೆ ವಿವಿಧ ಸ್ಥಳಗಳಲ್ಲಿ ಏಳು ದಿನಗಳ ಕಾಲ ಕಾರ್ಯಕ್ರಮ ನೀಡುವ ಸಂಗತಿ ಹೇಗಿರುತ್ತದೆ? ಹಾಗೆಯೇ ಆ ಎಲ್ಲ ಸ್ಥಳಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳ ವಿಶೇಷ ಭಕ್ಷ್ಯಗಳು ದೊರೆತರೆ ಹೇಗಿರುತ್ತದೆ? ಅಮೋಘ ಅಲ್ಲವೆ?

ಚೆನ್ನೈನಲ್ಲಿ ಈ ರೀತಿಯ ಒಂದು ಕಾರ್ಯಕ್ರಮ ಪೊಂಗಲ್ ಉತ್ಸವಕ್ಕಾಗಿ ಮೈದಳೆದು ಬೆಳೆಯುತ್ತಿದೆ. 'ಚೆನ್ನೈ ಸಂಗಮಮ್' ಎಂಬ ಈ ಕಾರ್ಯಕ್ರಮವನ್ನು ಒಂದು ಉತ್ಸವವೆಂದೇ ಹೇಳಬಹುದು. "ತಿರುವಿಳಾ ನಮ್ಮ ತೆರು ವಿಳಾ" ಎಂದು ಹೇಳಿಕೊಂಡು ಎರಡನೇ ವರ್ಷಕ್ಕೆ ಅಡಿಯಿಟ್ಟ ಚೆನ್ನೈ ಸಂಗಮಮ್ ಜನವರಿ 11 ರಿಂದ 18 ರವರೆಗೆ ಎಂಟು ದಿನಗಳ ಕಾಲ ಭರಪೂರವಾಗಿ ಪ್ರದರ್ಶನಗೊಂಡಿತು. ಚೆನ್ನೈನ ವಿವಿಧೆಡೆ ಹದಿನೆಂಟು ಸ್ಥಳಗಳಲ್ಲಿ ಒಂದು ವಾರ ಕಾಲ ಕಲಾವಿದರು ನೀಡಿದ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಕೊನೆಯ ದಿನ ಅಂದರೆ ಜನವರಿ 18 ರಂದು ಬೆಸೆಂಟ್ ನಗರದಲ್ಲಿರುವ ಎಲಿಸ್ ಬೀಚ್‌ನಲ್ಲಿ ಕಾರ್ಯಕ್ರಮದ ಸಮಾರೋಪ ರಮಣೀಯವಾಗಿತ್ತು. ವಿವಿಧ ಜಾನಪದ ನೃತ್ಯ, ಮಕ್ಕಳ ನೃತ್ಯಗಳು ಮನಸೆಳೆದವು. ಕಾರ್ಯಕ್ರಮವನ್ನು ತನ್ಮಯವಾಗಿ ವೀಕ್ಷಿಸುತ್ತಿರುವಾಗಲೇ ಆಗಸದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಸಿಡಿಯತೊಡಗಿದವು. ಇದು ಒಂದೆರಡು ನಿಮಿಷಗಳವೆರೆಗೆ ಖುಷಿಗಾಗಿ ಪಟಾಕಿ ಹಚ್ಚಿಸಿರಬಹುದೆಂಬ ನಿರೀಕ್ಷೆಯಲ್ಲಿ ನಾವಿದ್ದರೆ ಆಗ ನಡೆದಿದ್ದೇ ಬೇರೆ. ಅರ್ಧ ಗಂಟೆ ನಿರಂತರವಾಗಿ ಆಕಾಶದ ತುಂಬ ಬಣ್ಣ ಬಣ್ಣದ ವಿನ್ಯಾಸಗಳು ಕಾಣತೊಡಗಿದವು. ಆ ಪಟಾಕಿಯ ಸ್ಫೋಟ ಮತ್ತು ಅದು ಆಗಸದಲ್ಲಿ ಮೂಡಿಸುತ್ತಿದ್ದ ವಿವಿಧ ಆಕಾರಗಳ ಚಿತ್ತಾರಗಳಿಗೆ ನಾವು ಶಿಳ್ಳೆ ಹಾಕದೇ ಇರಲಾಗಲಿಲ್ಲ.

ಇದಷ್ಟೇ ಅಲ್ಲದೆ ಆ ಎಂಟು ದಿನಗಳೂ ಜನರಿಗೆ ತಮಿಳುನಾಡಿನ ವಿವಿಧ ಪ್ರದೇಶದ ಭೋಜನಗಳನ್ನು ಸವಿಯುವ ಅವಕಾಶ. ಮಧುರೈ, ವಿರುದನಗರ, ಕಾರೈಕ್ಕುಡಿ (ಚೆಟ್ಟಿನಾಡು), ಕನ್ಯಾಕುಮಾರಿ ಮುಂತಾದೆಡೆ ಸಿಗುವ ವಿಶೇಷ ತಿಂಡಿ, ತಿನಿಸುಗಳನ್ನು ದೊರೆತವು. ಸಾವಿರಕ್ಕೂ ಮೇಲ್ಪಟ್ಟ ಸಂಖ್ಯೆಯಲ್ಲಿ ಕಲಾವಿದರು ಜನರ ಮಧ್ಯೆ ಬೀದಿ ಬೀದಿಗಳಲ್ಲಿ ಪ್ರದರ್ಶನ ನೀಡುವಾಗ ಎಲ್ಲಿಯೂ ಗಲಭೆಗಳು, ಬೀದಿ ಕಾಳಗಗಳು ನಡೆಯಲಿಲ್ಲ.

ಕಳೆದ ವರ್ಷ ಚೆನ್ನೈ ಸಂಗಮಮ್‌ನ ಆರಂಭೋತ್ಸವವಾಗಿತ್ತು (ಫೆಬ್ರವರಿ 20, 2007 ರಂದು ಉದ್ಘಾಟನೆಗೊಂಡಿತು). ಆ ವರ್ಷ ಉತ್ಸವ ಇನ್ನೂ ಹೆಚ್ಚು ಮನಮೋಹಕವಾಗಿತ್ತು. ಜಾನಪದ ನೃತ್ಯ ಕಲಾವಿದರ ತಂಡವೊಂದು ನಿಮ್ಮ ಆಫೀಸು ಅಥವಾ ಮನೆಬೀದಿಯಲ್ಲಿ ದಿಢೀರನೇ ಪ್ರತ್ಯಕ್ಷಗೊಂಡು ಪ್ರದರ್ಶನ ನೀಡಿದರೆ ನಿಮಗೆ ಸಖೇದಾಶ್ಚರ್ಯವಾಗದೇ ಇರುತ್ತದೆಯೇ? ಕಳೆದ ವರ್ಷ ಹೀಗೆಯೇ ಜಾನಪದ ಕಲಾವಿದ ತಂಡಗಳು ನಗರದಲ್ಲಿರುವ ಹಲವಾರು ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಸಾಂಸ್ಕೃತಿ, ಜಾನಪದ ನೃತ್ಯ ಕಾರ್ಯಕ್ರಮಗಳನ್ನು ನೀಡಿ ದಿಢೀರನೇ ಮಾಯವಾಗುತ್ತಿದ್ದವು.

ರಾಜಕೀಯ: ವಾಸ್ತವಿಕವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಚೆನ್ನೈ ಸಂಗಮಮ್ ಹೆಚ್ಚು ರಸವಸತ್ತಾಗಿರಲಿಲ್ಲ. ಕಾರಣ ರಾಜಕೀಯ. ಒಂದು ಒಳ್ಳೆಯ ಕೆಲಸಕ್ಕೆ ರಾಜಕೀಯ ಮೆತ್ತಿಕೊಂಡರೆ ಅದು ರಾಡಿಯಾಗುತ್ತದೆ ಎಂಬುದಕ್ಕೆ ಸಾಕ್ಷಿ ಚೆನ್ನೈ ಸಂಗಮಮ್. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಮುಂದಾಳತ್ವದಲ್ಲಿ ಡಿಎಂಕೆ ಪಕ್ಷದ ಪೋಷಣೆಯಲ್ಲಿ ಈ ಉತ್ಸವ ಚಾಲನೆಗೆ ಬಂತು. ಆರಂಭಗೊಂಡ ವರ್ಷದಲ್ಲಿ ಕಲಾವಿದರು ಬಲು ಉತ್ಸಾಹದಿಂದ ಪಾಲ್ಗೊಂಡರು. ಆದರೆ ಆ ಕಲಾವಿದರಿಗೆ ಸಲ್ಲಬೇಕಿದ್ದ ಸಂಭಾವನೆಗಳನ್ನು ಸರ್ಕಾರ ಸರಿಯಾಗಿ ನೀಡಲಿಲ್ಲ. ಇದರ ಫಲವಾಗಿ ಕಲಾವಿದರ ಉತ್ಸಾಹ ಕುಗ್ಗಿತಲ್ಲದೇ ಈ ವರ್ಷ ಅವದ್ದು ಕಡಿಮೆ ಸಂಖ್ಯೆಯಿತ್ತು. ಸರ್ಕಾರ ಈ ಉತ್ಸವಕ್ಕಾಗಿ ಸುಮಾರು 10 ಕೋಟಿ ರು ಖರ್ಚಿನ ಲೆಕ್ಕ ನೀಡುತ್ತದೆ. ಆದರೆ ವಾಸ್ತವವಾಗಿ ಖರ್ಚಾಗುವುದು 2 ಕೋಟಿ ರುಪಾಯಿಗಳಷ್ಟೇ. ಮಿಕ್ಕಿದ್ದು ಮಾಮೂಲಿಯಾಗಿ ಬೇರೆ ಬೇರೆ ಗುಡಾಣ ಹೊಟ್ಟೆಗಳಿಗೆ ಹೋಗುತ್ತದೆ.

ಚೆನ್ನೈ ನಗರದ ಮೇರು ಪ್ರದರ್ಶನವಾಗಬೇಕಿದ್ದ ಚೆನ್ನೈ ಸಂಗಮಮ್ ಇದೀಗ ಡಿಎಂಕೆಯ ಪ್ರದರ್ಶನವೆಂದು ಹೆಸರು ಪಟ್ಟಿ ಪಡೆದುಕೊಂಡಿದೆ. ಕರುಣಾನಿಧಿಯವರ ಪುತ್ರಿ ಕನಿಮೊಳಿ ಅವರು ಚೆನ್ನೈ ಸಂಗಮಮ್‌ನ ಸಂಚಾಲಕಿ. ಸ್ಟ್ಯಾಲಿನ್ ಹೆಚ್ಚೂ ಕಡಿಮೆ ಇದರ ಬೆಂಗಾವಲು. ಸರ್ಕಾರೇತರ ಸಂಸ್ಥೆಯಾದ ತಮಿಳ್ ಮೈಯಂ ಎಂಬುದು ಚೆನ್ನೈ ಸಂಗಮಮ್ ಉತ್ಸವದ ಉಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ತಮಿಳ್ ಮೈಯಂ ಸಂಸ್ಥೆಯ ಮುಖ್ಯಸ್ಥ ಜಗತ್ ಗ್ಯಾಸ್ಪರ್ ರಾಜ್ ಅವರು ಎಲ್‌ಟಿಟಿಇಯೊಂದಿಗೆ ಶಾಮೀಲಾಗಿದ್ದಾರೆಂಬುದು ಎಲ್ಲೆಡೆ ಇರುವ ವದಂತಿ. ಈ ಹಿನ್ನೆಲೆಯಲ್ಲಿ ಜಯಲಲಿತಾ ನೇತೃತ್ವದ ಏಐಏಡಿಎಂಕೆ ಪಕ್ಷದಿಂದ ಚೆನ್ನೈ ಸಂಗಮಮ್ ಉತ್ಸವಕ್ಕೆ ತೀವ್ರ ಆಕ್ಷೇಪವಿದೆ. ಕರುಣಾನಿಧಿ ಕೆಳಗಿಳಿದು ಅಮ್ಮಾ ಅಧಿಕಾರಕ್ಕೆ ಏರಿದರೆ ಖಂಡಿತ ಈ ಉತ್ಸವ ರದ್ದಾಗುತ್ತದೆ. ಉತ್ತಮ ಪರಿಕಲ್ಪನೆಯ ಒಂದು ಉತ್ಸವ ಇನ್ನು ಮುಂದೆ ನಿಷ್ಕಳಂಕವಾಗಿ ಇರುವಂತೆ ಮಾಡಲು ರಾಜಯಕೀಯ ಪಕ್ಷಗಳು ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಕಾರ್ಯವಹಿಸಬೇಕು.

Labels: ,

Saturday, January 05, 2008

ಕನ್ನಡಿಗರಿಂದ ಕನ್ನಡದ ಕಗ್ಗೊಲೆಯಾಗಬೇಕೆ?

ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಅವುಗಳ ಜಾಹೀರಾತುಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸಹಜವಾಗಿಯೇ ಕನ್ನಡದಲ್ಲಿಯೂ ಸಾಕಷ್ಟು ಸರಕುಗಳು ತಯಾರಾಗುತ್ತಿವೆ. ಅಂದರೆ, ಕನ್ನಡದ ಬಳಕೆ ಹಿಂದೆಂದಿಗಿಂತಲೂ ವ್ಯಾಪಕವಾಗುತ್ತಿದೆ. ಈ ಸ್ಥಿತಿಗೆ ಕನ್ನಡ ಭಾಷೆ ಸಿದ್ಧವಿದೆಯೇ ಅಥವಾ ಕನ್ನಡಿಗರು ಇದಕ್ಕೆ ಸನ್ನದ್ಧರಾಗಿದ್ದಾರೆಯೇ? ಉತ್ತರ ಸ್ವಲ್ಪ ಕಷ್ಟವೇ. ಕನ್ನಡ ಭಾಷೆಯೇನೋ ಸಿದ್ಧವಿದೆ. ಆದರೆ ಕನ್ನಡ ಭಾಷೆಗೆ ಸಾಕಷ್ಟು ಕನ್ನಡಿಗರು ಸಿದ್ಧರಿಲ್ಲವೆನ್ನುವುದು ಸತ್ಯ.

ಆಂಗ್ಲ ಭಾಷೆಯಿಂದ ಬಹಳಷ್ಟು ವಿಷಯಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿವೆ. ಇವುಗಳಲ್ಲಿ ತಂತ್ರಜ್ಞಾನ, ಕಾನೂನು, ಕಂಪನಿ ವ್ಯವಹಾರ ಮುಂತಾದ ಕ್ಷೇತ್ರಗಳ ವಿಷಯಗಳೇ ಹೆಚ್ಚಾಗಿವೆ. ದುರದೃಷ್ಟವಶಾತ್, ನಮ್ಮಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಹಿತ್ಯ ಬೇಕಷ್ಟಿಲ್ಲ. ಜೊತೆಗೆ ನುರಿತ ಅನುವಾದಕರ ಅತೀವ ಕೊರತೆ ಕಾಡುತ್ತಿದೆ. ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆ ಎರಡೂ ಸರಿಯಾಗಿ ತಿಳಿಯದ ಹಾಗೂ ಭಾಷಾಂತರ ಎಂದರೇನೆಂದೇ ಅರಿಯದ ವ್ಯಕ್ತಿಗಳ ಕೈಯಲ್ಲಿ ಕನ್ನಡ ನಲುಗುತ್ತಿದೆ.

ಕೆಲವು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿಯವರು ತಮ್ಮ ವಿಂಡೋಸ್ ಸಾಫ್ಟ್‌ವೇರ್‌ನ ಒಂದು ಆವೃತ್ತಿಯನ್ನು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ತರಲು ಮುಂದಾಗಿತ್ತು. ಆದರೆ ಅದರ ಕನ್ನಡ ಆವೃತ್ತಿಯ ಕೆಟ್ಟ ಗುಣಮಟ್ಟ ಬೆಳಕಿಗೆ ಬಂದು ಒಂದು ವಿವಾದವೇ ಸೃಷ್ಟಿಯಾಗಿತ್ತು. ಮೈಕ್ರೋಸಾಫ್ಟ್ ವಿರುದ್ಧ ಟೀಕಾ ಪ್ರಹಾರ ನಡೆದವು. ಆಗ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್‌ವೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತಾದ್ದರಿಂದ ಕರ್ನಾಟಕ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಲಾಯಿತು. ಕೊನೆಗೆ, ಮೈಕ್ರೋಸಾಫ್ಟ್ ತನ್ನ ವಿಂಡೋಸ್‌ನ ಕನ್ನಡ ಆವೃತ್ತಿಯ ಬಿಡುಗಡೆಯನ್ನು ರದ್ದುಗೊಳಿಸಿತು.

ಮೈಕ್ರೋಸಾಫ್ಟ್, ಯಾಹೂ, ಗೂಗಲ್ ಮೊದಲಾದ ಪ್ರತಿಷ್ಠಿತ ಕಂಪನಿಗಳ ಜನಪ್ರಿಯತೆಯಿಂದಾಗಿ ಜನರು ಅವುಗಳಿಂದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸುತ್ತಾರೆ. ಅದರ ಮೂಲ ಸಾಫ್ಟ್‌ವೇರ್ ಆಗಲೀ ಅಥವಾ ಅದರ ಸ್ಥಳೀಯ ಭಾಷಾ ಆವೃತ್ತಿಯಾಗಲೀ ಜನರಿಗೆ ಆ ಕಂಪನಿಗಳ ಬ್ರ್ಯಾಂಡ್ ಅಷ್ಟೇ ಕಣ್ಮುಂದೆ ಇರುತ್ತದೆ. ಹಾಗಾಗಿ, ಮೈಕ್ರೋಸಾಫ್ಟ್‌ನಿಂದ ಅತ್ಯುಚ್ಚ ಕನ್ನಡ ಆವತ್ತಿಯನ್ನು ನಿರೀಕ್ಷಿಸುವ ಜನರು ಇದಕ್ಕೆ ಬದಲಾಗಿ ಕಳಪೆ ಗುಣಮಟ್ಟ ಕಂಡಾಗ ಅತೀವ ನಿರಾಶೆಗೊಳ್ಳುವುದು ಸಹಜವೇ.

ಮೈಕ್ರೋಸಾಫ್ಟ್ ಕಂಪನಿಯು ಕನ್ನಡ ಅರಿಯದ ಒಂದು ಕಂಪನಿ ಎಂದು ನಾವು 'ಹೋಗಲಿ, ಪರವಾಗಿಲ್ಲ' ಎನ್ನಬಹುದು. ಕನ್ನಡಿಗರದ್ದೇ ಆದ ಕರ್ನಾಟಕ ಸರ್ಕಾರವೇ ಕನ್ನಡದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ?! ಸರ್ಕಾರದ ಉಸ್ತುವಾರಿಯಲ್ಲಿ ನಡೆಯುವ ಶಾಲೆ, ಕಾಲೇಜುಗಳ ಕನ್ನಡ ಪಠ್ಯ ಪುಸ್ತಕಗಳು ಸಾಕಷ್ಟು ಉತ್ತಮ ಗುಣಮಟ್ಟದಲ್ಲಿರುತ್ತವೆ ಎಂಬುದು ಒಪ್ಪಬೇಕಾದ ಮಾತು. ನುಡಿ ಮುಂತಾದ ಸರ್ಕಾರೀ ಪ್ರಾಯೋಜಿತ ತಂತ್ರಾಂಶಗಳಲ್ಲಿಯೂ ಕನ್ನಡದ ಗುಣಮಟ್ಟ ತಕ್ಕಮಟ್ಟಿಗೆ ಪರವಾಗಿಲ್ಲವೆಂದೇ ಹೇಳಬಹುದು. ಆದರೆ ಇತ್ತೀಚಿನ ಮಾಹಿತಿ ತಂತ್ರಜ್ಞಾನದ ಭರಪೂರದಲ್ಲಿ ಕನ್ನಡವನ್ನು ಹಿಡಿದಿಡಲು ಸರ್ಕಾರ ವಿಫಲವಾಗುತ್ತಿದೆ ಅಥವಾ ನಿರ್ಲಕ್ಷ್ಯ ತೋರುತ್ತಿದೆ. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ರಾಷ್ಟ್ರೀಯ ಜ್ಞಾನ ಆಯೋಗದ (National Knowledge Commission) ವೆಬ್‌ಸೈಟ್‌ನ ಕನ್ನಡ ಆವತರಣಿಕೆಗೆ (http://knowledgecommission.gov.in/kannada/default.asp) ಒಮ್ಮೆ ಭೇಟಿಕೊಟ್ಟು ನೋಡಿ.

ರಾಷ್ಟ್ರೀಯ ಜ್ಞಾನ ಆಯೋಗವು ಭಾಷೆಯ ಅವಶ್ಯಕತೆ ಕುರಿತು ಭಾರತೀಯ ಪ್ರಧಾನಿಗೆ ಬರೆದ ಪತ್ರವೊಂದರ ಕನ್ನಡ ತರ್ಜುಮೆಯನ್ನು ನೀವು ಆ ವೆಬ್‌ಸೈಟ್‌ನಲ್ಲಿ ನೋಡಬಹುದು. ಹಾಗೆಯೇ ಆಂಗ್ಲ ಅವತರಣಿಕೆಗೆ http://knowledgecommission.gov.in/downloads/recommendations/TranslationLetterPM.pdf ಗೆ ಹೋಗಿ ಎರಡನ್ನೂ ಹೋಲಿಸಿ ನೋಡಿ. ಇಲ್ಲಿರುವ ಕನ್ನಡ ಭಾಷಾಂತರ ತೀರಾ ಹೇಸಿಗೆ ಎನಿಸುತ್ತದೆ.

ಉದಾಹರಣೆಗೆ ಕೆಳಗಿರುವ ಪಠ್ಯವನ್ನು ಓದಿರಿ....

"ಭಾಷಾಂತರಕ್ಕೆ ಹಲವಾರು ಸಲಕರಣೆಗಳನ್ನು ಸೃಷ್ಠಿಸುವುದು ಮತ್ತು ಉಳಿಸಿಕೊಳ್ಳುವುದು, ಈ ಕೆಳಗಿನ ಅಂಕೀಯ ಸಲಕರಣೆಗಳು ಒಳಗೊಂಡಂತೆ, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಕೋಶ, ದ್ವಿಭಾಷಾ ಪದಕೋಶಗಳು ಮತ್ತು ಭಾಷಾಂತರಕ್ಕೆ ಮೆದುಸರಕು. ಇದರೊಟ್ಟಿಗೆ ಯಂತ್ರ ಭಾಷಾಂತರ ಸನ್ನೆ ಬಳಕೆಯ ಹೊರಹೊಮ್ಮುತ್ತಿರುವ ತಂತ್ರಜ್ಞಾನವನ್ನು ತುಲನಾತ್ಮಕವಾದ ಕಡಿಮೆ ದರದಲ್ಲಿ ವೇಗವಾದ ಮತ್ತು ಬೃಹತ್ ಭಾಷಾಂತರ ಸಂಪುಟಗಳನ್ನು ಒದಗಿಸುವ ಉದ್ದೇಶದಿಂದ ಬೆಂಬಲಿಸುವುದು."

ಏನಾದರೂ ಅರ್ಥವಾಯಿತೆ? ಇದನ್ನು ಓದುವುದು ಅರ್ಥವಿಲ್ಲದ್ದು ಎಂದು ಮಾತ್ರ ನಿಮಗೆ ಅರ್ಥವಾಗಿರಬೇಕು. ಆ ಪಠ್ಯದ ಮೂಲ ಆಂಗ್ಲ ಪಠ್ಯ ಇಲ್ಲಿದೆ ಓದಿ....

"Create and maintain various tools for translation, including digital tools like Thesauri, Bilingual Dictionaries and software for translation. In addition, promote machine translation, leveraging emerging technologies to provide rapid and large volume of translation at a relatively low cost."

ಕನ್ನಡದಲ್ಲಿ ಇಂತಹ ಕಚಡ ಸರಕುಗಳನ್ನು ತುರುಕುವ ಬದಲು ಹಾಗೆಯೇ ಆಂಗ್ಲ ಭಾಷೆಯಲ್ಲಿಯೇ ಬಿಟ್ಟರೆ ಒಳ್ಳೆಯದಲ್ಲವೆ! ಮೊದಲನೆಯ ವಾಕ್ಯದಲ್ಲಿ ಅಲ್ಪವಿರಾಮದ ನಂತರ ಬರುವ ಪಠ್ಯವನ್ನು ತೀರಾ ಬಾಲಿಶ ಎಂದು ಹೇಳಬಹುದು. 'software' ಪದಕ್ಕೆ 'ಮೆದುಸರಕು' ಎಂದು ಯಥಾವತ್ ಅನುವಾದ ಮಾಡಿ ಕನ್ನಡಾಭಿಮಾನ ಮೆರೆದ ಅನುವಾದಕರನ್ನು ಕೊಂಡಾಡಬೇಕು. ಎರಡನೇ ವಾಕ್ಯದ ಬಗ್ಗೆ ಏನೂ ಹೇಳದಿರುವುದೇ ಲೇಸು. ಜ್ಞಾನ ಆಯೋಗದ ಈ ಅಜ್ಞಾನಕ್ಕೆ ಏನೆಂದು ಹೇಳುವುದು?

ಕನ್ನಡ ಅನುವಾದಕರಾಗಿ ಕೆಲಸ ಮಾಡುವ ಮಂದಿ ತಾವು ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನೆನಪಿಟ್ಟುಕೊಂಡರೆ ಒಳ್ಳೆಯದು. ಅವರು ಬಳಸುವ ಕನ್ನಡವೇ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಮಾದರಿಯಾಗುವ ಸಾಧ್ಯತೆಗಳೂ ಇವೆ. ಪಠ್ಯ ಪುಸ್ತಕ, ಬಳಕೆದಾರ ಕೈಪಿಡಿಗಳು, ತಂತ್ರಾಂಶಗಳು ಇತ್ಯಾದಿಗಳೆಡೆಯಲ್ಲಿ ಬಳಸಲಾಗುವ ಕನ್ನಡದ ಗುಣಮಟ್ಟವನ್ನು ಪರಿಶೀಲಿಸಲು ಒಂದು ಮಾನದಂಡ ನಿರ್ಮಾಣವಾಗಬೇಕು. ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಕಾನೂನು, ತಂತ್ರಜ್ಞಾನ, ತಂತ್ರಾಂಶ ಇತ್ಯಾದಿ ಕ್ಷೇತ್ರಗಳ ಬಗ್ಗೆ ಸಾಕಷ್ಟು ಸಾಹಿತ್ಯಗಳಿವೆ. ಆದರೆ ಕನ್ನಡದಲ್ಲಿ ಇವು ತೀರಾ ದುರ್ಲಭ. ಕತೆ ಕವನ, ಕಾದಂಬರಿ, ವಿಮರ್ಶೆ, ಗ್ರಂಥ ಮೊದಲಾದ ವಿಷಯಗಳಲ್ಲಿ ನಾವು ಸಾಕಷ್ಟು ಹಾಗೂ ಉಚ್ಚತಮ ಸಾಹಿತ್ಯಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಮೇಲೆ ಹೇಳಿದ ಪರ್ಯಾಯ ಸಾಹಿತ್ಯಗಳು ಮುಂದಿನ ತಲೆಮಾರನ್ನು ಪ್ರಭಾವಿಸುವ ಶಕ್ತಿಹೊಂದಿರುವುದರಿಂದ ಅವುಗಳತ್ತ ಸಾಹಿತ್ಯ ಹಾಗೂ ತಂತ್ರಜ್ಞಾನ ನುರಿತರ ಮುತುವರ್ಜಿ ಬಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕನ್ನಡದ ಕಗ್ಗೊಲೆಯನ್ನು ಕನ್ನಡಿಗರೇ ಮಾಡುವಂತಾಗುತ್ತದೆ.

Labels: ,

Saturday, December 22, 2007

ಸಾನಿಯಾ ಯಾಕೆ ಇಷ್ಟ?

ಸಾನಿಯಾ ಮಿರ್ಜಾ ನಿಮಗಿಷ್ಟವಾಗುವುದು ಯಾವ ವಿಷಯದಲ್ಲಿ? ಇದಕ್ಕೆ ಉತ್ತರ ನೀಡುವುದು ತುಸು ಕಷ್ಟಕರವೇ. ಸಾನಿಯಾಳನ್ನು ಇಷ್ಟಪಡುವ ಎಷ್ಟು
ಮಂದಿಗೆ ಟೆನಿಸ್ ಆಟ ಗೊತ್ತಿದೆ? ಬಹುಶಃ ಕನಿಷ್ಠ ಕಾಲುಭಾಗದಷ್ಟು ಮಂದಿಗೆ ಟೆನಿಸ್ ಆಟ ಸಂಪೂರ್ಣ ಗೊತ್ತಿರಲಿಕ್ಕಿಲ್ಲ. ಆದರೂ ಭಾರತೀಯರು
ಸಾನಿಯಾಳನ್ನು ಬಹುವಾಗಿ ಇಷ್ಟಪಡುತ್ತಾರೆ. ಸುತ್ತಿಬಳಸಿ ಹೇಳುವ ಬದಲು ಇಲ್ಲಿ ನೇರವಾಗಿ ಹೇಳುವುದು ಒಳ್ಳೆಯದು. ಸಾನಿಯಾಳ ಮಾದಕ ರೂಪು
ಆಕೆಯ ಟೆನಿಸ್ ಆಟಕ್ಕಿಂತ ಹೆಚ್ಚು ಜನಪ್ರಿಯ ಎಂಬುದು ನಿರ್ವಿವಾದ. ಹಾಗೆಂದು ಸಾನಿಯಾಳ ಟೆನಿಸ್ ಸಾಧನೆಯನ್ನು ಕೇವಲವಾಗಿ ಕಾಣುವಂತಿಲ್ಲ.
ಟೆನಿಸ್‌ನಲ್ಲಿ ಯಶಸ್ಸು ಗಳಿಸದಿದ್ದರೆ ಆ ಕ್ಷೇತ್ರದಲ್ಲಿ ಆಕೆ ಚಾಲನೆಯಲ್ಲಿರುವುದಿಲ್ಲ. ಆಕೆ ಚಾಲನೆಯಲ್ಲಿಲ್ಲದಿದ್ದರೆ ಆಕೆಯ ಸೌಂದರ್ಯ ಬೆಳಕಿಗೆ ಬರುವುದಿಲ್ಲ.
ಮಹಿಳಾ ಕ್ರೀಡಾಪಟುಗಳ ವಿಷಯ ಬಂದಾಗ ಸಾಧನೆ ಮತ್ತು ಸೌಂದರ್ಯಗಳೆರಡೂ ಬೆರೆತರೆ ಮಾತ್ರ ಜನಪ್ರಿಯತೆಯ ಶೃಂಗ ಏರಲು ಸಾಧ್ಯ. ಈಗ ಈ
ವಿಷಯ ಪ್ರಸ್ತಾಪ ಮಾಡಲು ಕಾರಣ ಗೂಗಲ್‌ನವರು ನೀಡಿದ ವರದಿ.

ಅಂತರ್ಜಾಲದಲ್ಲಿ ಮಾಹಿತಿ ಹುಡುಕುವ ಕಾರ್ಯಕ್ಕೆ ಗೂಗಲ್‌ನವರ ಸರ್ಚ್ ಎಂಜಿನ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ. ಭಾರತದಿಂದ ಜನರು ಮಾಹಿತಿ
ಶೋಧಿಸಿದ ವಿವರಗಳನ್ನು ಗೂಗಲ್ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಸಾನಿಯಾಳದ್ದು ಅಗ್ರ ಸ್ಥಾನ. ಅಂದರೆ, ಮಾಹಿತಿ ಶೋಧಿಸಿದ ಭಾರತೀಯರಲ್ಲಿ
ಅತೀ ಹೆಚ್ಚು ಜನರು ಸಾನಿಯಾಳ ಬಗ್ಗೆ ಶೋಧಿಸಿದ್ದಾರೆ. ಇದು 2007 ವರ್ಷಕ್ಕಾಗಿಯ ವರದಿ. ಕಳೆದ ವರ್ಷದಲ್ಲೂ ಸಾನಿಯಾಳೇ ಅಗ್ರಸ್ಥಾನ ಪಡೆದಿದ್ದಳು. ಆರಂಭದಲ್ಲಿ ನಾನು ಹೇಳಿದ ಸೌಂದರ್ಯ, ಸಾಧನೆ ಮತ್ತು ಜನಪ್ರಿಯತೆಯ ತರ್ಕಕ್ಕೆ ಪುಷ್ಟಿ ನೀಡುವುದು ರಷ್ಯನ್ ಟೆನಿಸ್ ತಾರೆ ಮಾರಿಯಾ ಶರಾಪೋವಾ. ಆಕೆಯ ಮೈಮಾಟ ಟೆನಿಸ್ ಪ್ರೇಮಿಗಳಿಗೆ ತಿಳಿದದ್ದೇ. ಇಂತಹ ಶರಾಪೋವಾ ಕೂಡ ಪಟ್ಟಿಯಲ್ಲಿ ಉಚ್ಚ ಸ್ಥಾನ ಪಡೆದಿದ್ದಾಳೆ. ಆದೇ... ಬೆಲ್ಜಿಯಂನ ಬಲಿಷ್ಠ ಟೆನಿಸ್ ಪಟು ಜಸ್ಟಿನ್ ಹೆನಿನ್ ಅವರ ಬಗ್ಗೆ ಹುಡುಕಲು ಮುಂದಾದವರ ಸಂಖ್ಯೆ ನಗಣ್ಯ. ಏಕೆಂದರೆ ಹೆನಿನ್ ಅವರದ್ದು ಮಾದಕ ಮೈಮಾಟವಲ್ಲ. ಟೆನಿಸ್‌ನಲ್ಲಿ ಬಹಳ ದಿನಗಳಿಂದ ಉತ್ತಮ ಸಾಧನೆ ತೋರದೆ ಹಿಂದುಳಿದಿರುವ ಆನಾ ಕೋರ್ನಿಕೋವಾ ಮಾತ್ರ ಕ್ರೀಡಾ ಶೋಧಕರ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಇದರರ್ಥ, ತುಂಡುಡುಗೆ ತೊಟ್ಟು ಆಡುವ ಆಟಗಾರ್ತಿಯರ ದೇಹ ಸಿರಿ ವೀಕ್ಷಿಸಲು ಅವರ ಚಿತ್ರಗಳನ್ನು ನೋಡುವುದರಲ್ಲಿ ಅಂತರ್ಜಾಲಿಗಳು ದಂಬಾಲು ಬೀಳುತ್ತಾರೆ.

ಗೂಗಲ್‌ನವರು ಶೋಧಕರ ಮಾಹಿತಿಯನ್ನು ವಿವಿಧ ವಿಭಾಗವಾಗಿ ವಿಭಜಿಸಿ ಪ್ರಕಟಿಸಿದ ಪಟ್ಟಿಯ ವಿವರ ಕೆಳಗಿದೆ ನೋಡಿ:

2007 ರಲ್ಲಿ ಬಹಳ ಏರುಗತಿಯಲ್ಲಿ ಶೋಧನೆ ಕಂಡ ವಿಷಯಗಳು -

ಓರ್ಕುಟ್ (Orkut)
ಯೂಟ್ಯೂಬ್ (ಲಕ್ಷಾಂತರ ಚಿತ್ರಗಳು ಈ ತಾಣದಲ್ಲಿ ಲಭ್ಯ)
ಜಿಮೇಲ್ (ಗೂಗಲ್‌ನವರ ಇಮೇಲ್)
ನಕ್ಷೆ (ಪ್ರವಾಸಿಗರ ಕುತೂಹಲ)
ಗೂಗಲ್
ಭಾರತೀ ರೇಲ್ವೆ (ಬಹುಶಃ ಆನ್‌ಲೈನ್ ರೇಲ್ವೆ ಬುಕಿಂಗ್‌ಗಾಗಿ ಇರಬಹುದು)
ಯಾಹೂ ಮೇಲ್ (ಗೂಗಲ್‌ನಲ್ಲಿ ಯಾಹೂ ಮೇಲ್ ಶೋಧ... ಆಶ್ಚರ್ಯ)
ತಂತ್ರಜ್ಞಾನ (ಅಂತರ್ಜಾಲ ಬಳಕೆದಾರರು ಹೆಚ್ಚಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿರುವುದು ಇದಕ್ಕೆ ಕಾರಣ)
ಯಾಹೂ (!!)
ಜಪಕ್ (Zapak - ಗೂಗಲ್‌ನ ಮತ್ತೊಂದು ಪ್ರತಿಸ್ಪರ್ಧಿ)

ಹಳೆಯ ಸ್ನೇಹಿತರನ್ನು ಅರಸಲು, ಹೊಸ ಸ್ನೇಹಿತರನ್ನು ಹಿಡಿಯಲು, ಮಾಡಬಾರದ ಕೆಲಸ ಮಾಡಲು, ಟೈಂ ಪಾಸ್ ಮಾಡಲು ಈಗ ಇರುವ ಜನಪ್ರಿಯ ಮಾರ್ಗವೆಂದರೆ ಓರ್ಕುಟ್... ಈ ಓರ್ಕುಟ್ ಎಂಬುದು ಗೂಗಲ್‌ನವರದ್ದೇ ಒಂದು ಪ್ರಾಡಕ್ಟ್. ಇದು ಅಗ್ರ ಸ್ಥಾನ ಪಡೆದಿರುವುದು ಆಶ್ಚರ್ಯವಲ್ಲ.


ಗೂಗಲ್‌ನಲ್ಲಿ ಹುಡುಕಾಟದ ವಸ್ತುವಾದ ಬಾಲಿವುಡ್ ತಾರೆಯರ ಅಗ್ರ ಹತ್ತು ಮಂದಿಯ ಪಟ್ಟಿ-

ಐಶ್ವರ್ಯ ರೈ (ವಾವ್... ಬೆಕ್ಕಿನ ಕಣ್ಣಿನ ಸುಂದರಿ ಮದುವೆಯಾದರೂ ಕುಂದದ ಜನಪ್ರಿಯತೆ - ಹುಡುಗರ ಶೋಧಕ್ಕೆ ಬಲಿ)
ಸಲ್ಮಾನ್ ಖಾನ್ (ಬಹುಶಃ ಬಾಡಿ ಮೋಡಿಗೆ ಒಳಗಾದ ಕನ್ಯೆಯರು ಕಾರಣ)
ಹೃತಿಕ್ ರೋಷನ್ (ಮೂರನೇ ಸ್ಥಾನ... ಆಶ್ಚರ್ಯ)
ಕತ್ರೀನಾ ಕೈಫ್ (ಲಂಬೂ ಸೆಕ್ಸೀ ಮಾಡೆಲ್ - ಮೇಲೇರದಿದ್ದರೆ ಹೇಗೆ)
ಶಾರುಕ್ ಖಾನ್ (ಚಕ್ ದೇ ಇಂಡಿಯಾ ಎಂದು ಕೂಗಿದ ಮರುಹೊತ್ತಿನಲ್ಲೇ ಓಂ ಶಾಂತಿ ಓಂ ಎಂದು ಹೇಳಿ ಬಾಡಿ ಬಿಲ್ಡ್ ಮಾಡಿದ ಅಪ್ರತಿಮ ಭಾದಶಾ)
ಮಲ್ಲಿಕಾ ಶೆರಾವತ್ (ಇನ್ನೂ ಜನಪ್ರಿಯತೆಯಲ್ಲಿರುವ ಅಗುದೀ ಸೆಕ್ಸೀ ನಟಿ)
ಪ್ರಿಯಾಂಕ ಚೋಪ್ರಾ (ಹೇಳದಿರುವುದಕ್ಕೆ ಏನಿದೆ)
ಕರೀನಾ ಕಪೂರ್ (ಈಕೆ ಕೆಳಭಾಗಕ್ಕೆ ಬಂದದ್ದು ಆಶ್ಚರ್ಯ)
ರಾಣಿ ಮುಖರ್ಜಿ (ಪರವಾಗಿಲ್ಲ... ಬಾಲಿವುಡ್ ಸೆಕ್ಸಿ ಬೆಡಗಿಯರ ಮಧ್ಯೆ ಈಕೆ ಸ್ಥಾನ ಪಡೆದುಕೊಂಡಿದ್ದಾಳಲ್ಲ)
ದೀಪಿಕಾ ಪಡುಕೋಣೆ (ಎಂತಹ ಗಂಡೆದೆಯೂ ಈಕೆಗೆ ಹೃದಯ ಒಪ್ಪಿಸದೇ ಇರಲಾರ ಎಂಬುದು ಈಗಿನ ಆಡುನುಡಿ)

ಅತೀ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳು -

ಸ್ಪೈಡರ್ ಮ್ಯಾನ್ (ಬಾಲ ಜಾಲಿಕರ ಬಲೆ)
ಶಿವಾಜಿ (ರಜನೀ ವಿಸ್ಮಯ)
ಧೂಮ್ 2 (ಹೃತಿಕ್, ಐಶ್ವರ್ಯ ಪೋಟಾಪೋಟಿ)
ಓಂ ಶಾಂತಿ ಓಂ (ಬಾಡಿ ಬಿಲ್ಡರ್ ಶಾರುಕ್ ಮಹಿಮೆ)
ಚಕ್ ದೇ ಇಂಡಿಯಾ (ಶಾರುಕ್ ಕೂಗಿಗೆ ಎಚ್ಚೆತ್ತ ಇಂಡಿಯಾ)
ಸಾವರಿಯಾ (ಓಂ ಶಾಂತಿ ಓಂ ಜೊತೆಗೆ ತೂರಿಬಂದ ಪುಷ್ಪ)
ಹ್ಯಾರಿ ಪಾಟರ್ (ಮಕ್ಕಳ ಜಾದೂಗಾರ)
ಗೋಸ್ಟ್ ರೈಡರ್ (ಚಿತ್ರ ವಿಚಿತ್ರ ಚಿತ್ರಗಳಿಗಾಗಿ ಪೈಪೋಟಿ ಇರಬಹುದು)
ಭೂಲ್ ಭುಲೈಯಾ (ಆಪ್ತ ಮಿತ್ರ ಚಿತ್ರದಂತೆ ಇದೂ ಮಲಯಾಳಂನಿಂದ ಹಿಂದಿಗೆ ರೀಮೇಕ್ ಆದ ಚಿತ್ರ - ಗಲ್ಲಾಪೆಟ್ಟಿಗೆಯಲ್ಲಿ ಓಡದಿದ್ದರೂ
ಅಂತರ್ಜಾಲಿಗಳೊಂದಿಗೆ ಚೆನ್ನಾಗಿ ಆಟವಾಡಿದೆ)
ಜೂಂ ಬರಾಬರ್ ಜೂಂ (ಅಪ್ಪಟ ಹಿಂದಿ ಅಂತರ್ಜಾಲಿಗಳಿಗೆ ಮಾತ್ರ ಇದು ವಿಶೇಷ)

ಇಲ್ಲಿ ಮರಾಠಿ-ಕನ್ನಡ-ತಮಿಳು ಸಮ್ಮಿಶ್ರ ನಟ ಸೂಪರ್‌ಸ್ಟಾರ್ ರಜನೀಕಾಂತರ ಜನಪ್ರಿಯತೆಗೆ ಇಗೋ ಮೇಲಿದೆ ಸಾಕ್ಷಿ.


ಅಗ್ರ 10 ಸ್ಥಳಗಳ ಪಟ್ಟಿ -

ಕೇರಳ (ಸಹಜವೇ)
ಸಿಂಗಾಪುರ (ಭಾರತಕ್ಕೆ ಹತ್ತಿರವಾಗಿರುವ ಒಂದು ವಿಸ್ಮಯ ನಗರಿ)
ಗೋವಾ (ಹೇಳುವುದೇನಿದೆ?)
ಆಸ್ಟ್ರೇಲಿಯಾ
ಲಂಡನ್
ದುಬೈ (ಕೆಲಸ ಹುಡುಕುವವರ ಹಣೆಬರಹ)
ರಾಜಸ್ತಾನ
ಜೈಪುರ
ಕಾಶ್ಮೀರ
ಊಟಿ

ಇಲ್ಲಿ ನಮ್ಮ ಕರ್ನಾಟಕದ ಅಥವಾ ಇಲ್ಲಿನ ಯಾವುದೇ ಸ್ಥಳಗಳು ಜನಪ್ರಿಯವಾಗಿಲ್ಲವೆಂಬ ಅರ್ಥವೇ?

ಇನ್ನು ರಾಜಕೀಯ ವ್ಯಕ್ತಿಗಳ ಪಟ್ಟಿ -

ಮಹಾತ್ಮ ಗಾಂಧಿ
ಅಬ್ದುಲ್ ಕಲಾಂ
ಸೋನಿಯಾ ಗಾಂಧಿ
ಇಂದಿರಾ ಗಾಂಧಿ
ರವೀಂದ್ರನಾಥ ಠಾಗೋರ್
ಪ್ರತಿಭಾ ಪಾಟೀಲ್
ಸುಭಾಷ್ ಚಂದ್ರ ಬೋಸ್
ರಾಹುಲ್ ಗಾಂಧಿ
ಸರೋಜಿನಿ ನಾಯ್ಡು
ಮಾಯಾವತಿ

ಕ್ರೀಡಾಪಟುಗಳ ಪಟ್ಟಿ -

ಸಾನಿಯಾ ಮಿರ್ಜಾ
ಮಾರಿಯಾ ಶರಾಪೋವಾ
ಸಚಿನ್ ತೆಂಡೂಲ್ಕರ್
ಜಾನ್ ಸೆನಾ
ಡೇವಿಡ್ ಬೆಕೆಮ್
ಕ್ರಿಶ್ಚಿಯಾನೋ ರೊನಾಲ್ಡೋ
ರಾಹುಲ್ ದ್ರಾವಿಡ್
ಮಹೇಂದ್ರ ಸಿಂಗ್ ದೋನಿ
ಸೌರವ್ ಗಂಗೂಲಿ
ಆನಾ ಕೌರ್ನಿಕೋವಾ

ಈ ಮೇಲಿನ ಪಟ್ಟಿ ಯಾವುದೇ ಸಮೀಕ್ಷೆಯಂತೂ ಅಲ್ಲ. ಗೂಗಲ್‌ನಲ್ಲಿ ಕಂಡುಬಂದ ಸತ್ಯವಿಷಯ.

Thursday, November 15, 2007

ಸ್ಯಾಂಡಲ್‌ವುಡ್‌ಗೆ ನವನಿರ್ದೇಶಕರು ಬೇಕಾಗಿದ್ದಾರೆ

ಕತ್ತಿ, ಮಚ್ಚು, ಲಾಂಗು ಮತ್ತೀಗ ಗನ್ನು ಹಿಡಿದು ಅಲ್ಲಲ್ಲಿ ಪ್ರೀತಿ, ಪ್ರೇಮ, ತಾಯಿ, ಸ್ನೇಹ ಮುಂತಾದ ಸೆಂಟಿಮೆಂಟುಗಳನ್ನು ಸೇರಿಸಿ ಒಂದು ಫಾರ್ಮುಲಾ ತಯಾರಿಸಿ ಫ್ಯಾಕ್ಟರಿ-ಮೇಡ್ ಚಲನಚಿತ್ರಗಳನ್ನು ತೆಕ್ಕೆಗೆ ಹಾಕಿಕೊಂಡು ತೆರೆಗೆ ಅಪ್ಪಳಿಸುತ್ತಿರುವ ಕನ್ನಡ ಚಿತ್ರರಂಗ ಇದೀಗ ಏಕಮುಖ ಸಂಚಾರ ವ್ಯವಸ್ಥೆಯಲ್ಲಿದೆ. ಒಂದು ಚಿತ್ರ ಯಶಸ್ವಿಯಾಯಿತೆಂದರೆ ಅದರ ಯಾವುದಾದರೂ ಒಂದು ಅಂಶವನ್ನು ಸೂತ್ರದೊಳಗೆ ಸೇರಿಸಿ ಸರಿದೂಗಿಸುವ ನಮ್ಮ ಚಿತ್ರ ಕರ್ಮಿಗಳ ಉಜ್ವಲ ಕಲೆಯನ್ನು ಮೆಚ್ಚಿಕೊಳ್ಳಲೇಬೇಕು.

ಪಾತಕಿ ಲೋಕದ ಹಸಿ, ಬಿಸಿ ಮತ್ತು ಹಳಸು ಕತೆಗಳನ್ನು ಹೊಂದಿರುವ ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿರುವ ಭೂಗತ ಜಗತ್ತಿನ ಹುಡುಗರ ಸಂಖ್ಯೆಯನ್ನೇ ಮೀರಿಸುವಂತೆ ದಿನೇ ದಿನೇ ಹುಲುಸಾಗಿ ಬೆಳೆಯುತ್ತಿವೆ. ಹಾಯ್ ಬೆಂಗಳೂರು, ಅಗ್ನಿ, ಲಂಕೇಶ್ ಪತ್ರಿಕೆಯಂತಹ 'ಉಗ್ರ'ಗಾಮಿ ಪತ್ರಿಕೆಗಳ ಸ್ಥಿತಿಯನ್ನು ಲೈಬ್ರರಿಗಳಲ್ಲಿ ನೋಡಿದರೇ ಚೆನ್ನ. ಆ ಪತ್ರಿಕೆಗಳು ಲೈಬ್ರರಿಗೆ ಪ್ರವೇಶವಾದ ಮೊದಲ ದಿನವೇ ಜನರ ಕೈ, ಕಣ್ಣಿಗೆ ಸಿಲುಕಿ ನುಜ್ಜುಗುಜ್ಜಾಗಿರುತ್ತವೆ. ಹಸಿ ಹಸಿ ರೌಡಿಸಂ ಕತೆಗಳನ್ನು ಓದಲು ಆ ಪತ್ರಿಕೆಗಳ ಮೇಲೆ ಕಿರಾತಕರಂತೆ ಎರಗುವ ಜನರು ಅಂತಹ ರೌಡಿಸಂ ಸಿನಿಮಾಗಳನ್ನು ಬಿಟ್ಟಾರೆಯೇ? ಟಿವಿ ಛಾನೆಲ್‌ಗಳಲ್ಲಿ ಕ್ರೈಂ ಪ್ರೋಗ್ರಾಂಗಳಷ್ಟು ಜನಪ್ರಿಯತೆ ಸಾಧಿಸಿರುವ ಕಾರ್ಯಕ್ರಮಗಳು ಇವೆಯೇ? ಧಾರಾವಾಹಿಗಳನ್ನು ನೋಡಲು ಹೆಂಗಳೆಯರು ಹಪಹಪಿಸುತ್ತಾರೆ; ಸಿನಿಮಾ, ಕ್ರೀಡೆ, ಸುದ್ದಿ ಇನ್ನೂ ಮುಂತಾದ ಕಾರ್ಯಕ್ರಮಗಳಿಗೆ ಬೇರೆ ಬೇರೆ ವೀಕ್ಷಕ ಬಳಗವಿದೆ; ಆದರೆ ಕ್ರೈಂ ಕಾರ್ಯಕ್ರಮಗಳಿಗೆ ಆ ಎಲ್ಲ ಬಹುತೇಕ ವರ್ಗಗಳ ಜನರು ತಪ್ಪದೇ ಮುಗಿಬೀಳುತ್ತಾರೆ.

ಸಿನಿಕ ಜನರ ಈ ನಾಡಿಯನ್ನು ಸುಲಭವಾಗಿ ಕಂಡುಹಿಡಿದ ಸ್ಯಾಂಡಲ್‌ವುಡ್ ತನ್ನ ಕತೆಗಳ ಸೂತ್ರಗಳಲ್ಲಿ ರೌಡಿಸಂ ಅನ್ನು ಆಧಾರ ಮಾಡಿಕೊಂಡಿರುವುದು ಅಚ್ಚರಿಯಲ್ಲ. ಒಂದೂವರೆ ದಶಕದ ಹಿಂದೆ ಒರಿಜಿನಲ್ ರೌಡಿಗಳನ್ನೇ ಹಾಕಿಕೊಂಡು ಉಪೇಂದ್ರ ತೆಗೆದ ಓಂ ಚಿತ್ರ ಭರ್ಜರಿ ಯಶಸ್ವಿಯಾದದ್ದೇ ಸ್ಯಾಂಡಲ್‌ವುಡ್‌ನಲ್ಲಿ ರೌಡಿಸಂ ಶಕೆ ಚಾಲನೆಗೊಂಡಿತು.

ಪ್ರತಿಯೊಬ್ಬ ರೌಡಿಯ ಹಿನ್ನೆಲೆಯಲ್ಲಿ ಹುಡುಗಿ ಅಪ್ಪಳಿಸಿ ಹೋಗುವುದರಿಂದ ಅಲ್ಲಲ್ಲಿ ರಕ್ತಭರಿತ ಪ್ರೇಮ ಕಾವ್ಯ ಸೃಷ್ಟಿಯಾಗುತ್ತವೆ. ರಕ್ತಸಿಕ್ತ ಸ್ಯಾಂಡಲ್‌ವುಡ್ 'ಲಾಂಗ್' ಕಥಾ ಸೂತ್ರಕ್ಕೆ ಪ್ರೇಮವೂ ತೂರಿಕೊಳ್ಳುತ್ತದೆ. ಹಲವಾರು ತವರಿನ ಕತೆಗಳು ಆಗಮಿಸಿ ಜನರ ಕಣ್ಣಲ್ಲಿ ನೀರು ಹನಿಕಿಸುವಷ್ಟು ಯಶಸ್ವಿಯಾಗಿರುವಾಗ ತಾಯಿ ಸೆಂಟಿಮೆಂಟು ಕೂಡ ಸ್ಯಾಂಡಲ್‌ವುಡ್ ಸೂತ್ರಕ್ಕೆ ಗಂಟುಹಾಕಿಕೊಳ್ಳುತ್ತದೆ. ರಕ್ತದ ಕೋಡಿ ಮತ್ತು ಕಣ್ಣೀರು ಕೋಡಿ ಬೆರೆತು ರಕ್ತ ಕಣ್ಣೀರುಗಳು ಸೃಷ್ಟಿಯಾಗುತ್ತವೆ. ಸಾಯಿಕುಮಾರರ ಅಕ್ಕನ್, ಅಮ್ಮನ್ ಪಂಚಿಂಗ್ ಡೈಲಾಗ್‌ಗಳಿಗೆ ಪಡ್ಡೆ ಹುಡುಗರ ಶಿಳ್ಳೆ ಬೆರೆತಾಗ ಚಿತ್ರಗಳಿಗೆ ಹಸಿಹಸಿ ಸಂಭಾಷಣೆಗಳು ಸಿದ್ಧವಾಗುತ್ತವೆ. ಸ್ಯಾಂಡಲ್‌ವುಡ್‌ನ ಈ ದಿಢೀರ್ ಸಿದ್ಧಸೂತ್ರಗಳಿರುವಾಗ ಕತೆ, ಚಿತ್ರಕತೆ, ನಟನೆ ಮತ್ತು ನಿರ್ದೇಶನಗಳು ಕೇವಲ ನಾಮಕಾವಸ್ತೆಗಷ್ಟೇ ಅಸ್ತಿತ್ವದಲ್ಲಿರುತ್ತವೆ.

ಹಾಲಿಹುಡ್ಡು, ಬಾಲಿವುಡ್ಡು, ಕೋಲಿವುಡ್ಡು, ಟಾಲಿವುಡ್ಡು, ಮೋಲಿವುಡ್ಡು ಅಥವಾ ಇನ್ಯಾವುದೇ ಚಿತ್ರರಂಗದಂತೆ ಸ್ಯಾಂಡಲ್‌ವುಡ್ ಕೂಡ ಸಿದ್ಧಸೂತ್ರಗಳಿಗೆ ಶರಣಾಗಿದೆ ಎಂಬುದು ನಿಜ. ಆದರೆ ಕೋಲಿವುಡ್ (ತಮಿಳು) ಮತ್ತು ಮೋಲಿವುಡ್ (ಮಲಯಾಳ) ಗಳಲ್ಲಿ ಚಿತ್ರಕತೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಟೋಲಿವುಡ್ (ತೆಲುಗು) ಚಿತ್ರಗಳಲ್ಲಿ ಹೀರೋಯಿಸಂ ಅರಿಭಯಂಕರವಾಗಿರುವುದಾರೂ ಅವುಗಳ ಚಿತ್ರೀಕರಣ ಶೈಲಿಗಳು ಅತ್ಯುನ್ನತ ಮಟ್ಟಕ್ಕೆ ಏರಿಬಿಟ್ಟಿವೆ. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಜೀತಸೇವೆ ಮಾಡಿ ಅನುಭವ ಗಳಿಸಿ ಪಕ್ವತೆ ಸಾಧಿಸಿದಂತೆ ಕಂಡುಬರುವ ಒಬ್ಬ ನಿರ್ದೇಶಕನಿಗಿಂತ ತಮಿಳಿನಲ್ಲಿ ಮೀಸೆ ಕೂಡ ಸರಿಯಾಗಿ ಬಲಿಯದ ಒಬ್ಬ ಹುಡುಗ ಸಾವಿರ ಪಾಲು ಉತ್ತಮವಾದ ಒಂದು ಚಿತ್ರವನ್ನು ತಯಾರಿಸುತ್ತಾನೆ. ಏಕೆ ಹೀಗೆ? ಉತ್ತರ ಸಿಗುವುದು ತುಸು ಕಷ್ಟಕರವೇ. ಉತ್ತರ ಬೇಕೆಂದಿದ್ದಲ್ಲಿ ನಾವು ಆ ಚಿತ್ರರಂಗದ ಹಿನ್ನೆಲೆ, ಮುನ್ನೆಲೆ, ಹಾಗೂ ಅದರ ಕರ್ಮಿಗಳ ದೃಷ್ಟಿಕೋನಗಳಲ್ಲಿ ಅಡಕವಾಗಿರುವ ಅಂಶಗಳನ್ನು ಕೆದಕಬೇಕಾಗುತ್ತದೆ. ಆದರೆ ಒಟ್ಟಾರೆ, ಚಿತ್ರ ನಿರ್ಮಾಣ ಒಂದು ಕಲೆ ಎಂಬ ಅಂಶ ಮಾತ್ರ ಸುಸ್ಪಷ್ಟ.

ಯಾವುದೇ ಚಿತ್ರದ ಜೀವಾಳವು ಅದರ ಚಿತ್ರಕತೆಯೇ ಆಗಿರುತ್ತದೆ. ನಟನೊಬ್ಬನ ನಟನೆಯಲ್ಲಿ ಲೋಪದೋಷಗಳಿದ್ದಲ್ಲಿ ಅದನ್ನು ಮರೆಮಾಚುವಂತೆ ದೃಶ್ಯೀಕರಿಸಬಲ್ಲ ಜಾಣ್ಮೆ ಇರುವಂತಹ ನಿರ್ದೇಶಕನು ಚಿತ್ರಕ್ಕೆ ಸೂತ್ರದಾರನಾಗುತ್ತಾನೆ. ಆದರೆ ಕನ್ನಡ ಚಿತ್ರಗಳು ತಮ್ಮವೇ ಸೂತ್ರಗಳಿಗೆ ಕಟ್ಟುಬಿದ್ದು ಸಾಗುವುದರಿಂದ ಅವುಗಳನ್ನು ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಕೆ ಮಾಡಿದಾಗ ಪೇಲವವಾಗಿ ಕಾಣುತ್ತವೆ. ಕನ್ನಡ ಚಿತ್ರಗಳಿಗಿಂತ ಕಡಿಮೆ ಬಜೆಟ್‌ಗಳನ್ನು ಹೊಂದಿರುವ ಮಲಯಾಳ ಚಿತ್ರಗಳ ಬಗ್ಗೆ ಯಾವುದೇ ಜನರೂ ಮೂಗು ಮುರಿಯುವುದಿಲ್ಲ. ಏಕೆಂದರೆ ಆ ಚಿತ್ರಗಳಲ್ಲಿರುವ ಸರಕಿನ ಗುಣಮಟ್ಟ ಅಂತಹದ್ದು. ನಾವು ಬೇರೆ ಬೇರೆ ಭಾಷೆಯ ಚಿತ್ರಗಳೊಂದಿಗೆ ಸ್ಪರ್ಧಿಸುತ್ತಿರುವಾಗ ಹೋಲಿಕೆ ಮಾಡುವ ಪ್ರಮೇಯ ಖಂಡಿತವಾಗಿ ಬರುತ್ತದೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಬಹಳ ಚಿಕ್ಕದು, ಕನ್ನಡಿಗರು ಕನ್ನಡ ಚಿತ್ರಗಳನ್ನು ನೋಡುವುದು ಕಡಿಮೆ ಮುಂತಾಗಿ ಕೇಳಿ ಬರುತ್ತಿದ್ದ ಅನುಮಾನಗಳಿಗೆ ಮುಂಗಾರು ಮಳೆ ಮತ್ತು ದುನಿಯಾ ತಕ್ಕ ಉತ್ತರ ನೀಡಿವೆ.

ಪ್ರತಿಯೊಂದು ಚಿತ್ರರಂಗಕ್ಕೆ ಅದರದ್ದೇ ಆದ ಶೈಲಿಗಳಿರುವುದರಿಂದ ಪರಸ್ಪರ ಹೋಲಿಕೆ ನಡೆಸುವುದು ಸರಿಯಲ್ಲ ಎಂಬ ವಿಚಾರ ಸರಿಯೇ. ಆದರೆ ಯಾವುದೇ ಶೈಲಿಯಿದ್ದರೂ ಗುಣಮಟ್ಟ ಎಂಬ ಒಂದು ನಿರ್ಣಾಯಕ ಅಂಶವಿರುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಿವಿಧ ಪ್ರಾಕಾರಗಳಿವೆ. ಅವುಗಳಲ್ಲಿ ಯಾವ ಪ್ರಾಕಾರ ಸರಿ ಎಂಬ ಹೋಲಿಕೆ ತರವಲ್ಲ ಎಂಬುದು ನಿಜ. ಆದರೆ ಆಯಾ ಪ್ರಾಕಾರಗಳಲ್ಲಿರುವ ಸಾಹಿತ್ಯದ ಸರಕು ಎಷ್ಟು ಗುಣಮಟ್ಟವುಳ್ಳದ್ದು ಎಂಬುದು ಮುಖ್ಯ. ಹಾಗೆಯೇ ಚಲನಚಿತ್ರಗಳಲ್ಲೂ ಕೂಡ.

ಸ್ಯಾಂಡಲ್‌ವುಡ್‌ಗೆ ಪ್ರಸಕ್ತ ಬಿಸಿರಕ್ತಗಳು ಹರಿಯಬೇಕಿವೆ. ಅಂದರೆ ಮಚ್ಚು, ಲಾಂಗುಗಳ ಕತೆಗಳಲ್ಲಿ ಹರಿಸುವ ಬಿಸಿನೆತ್ತರುಗಳಲ್ಲ. ಬಿಸಿ ರಕ್ತದ ಯುವ ನಟರು ಈಗಾಗಲೇ ತೆರೆಗೆ ಒಡ್ಡಿಕೊಂಡಿದ್ದಾರಾದರೂ ನಮಗೆ ಈಗ ಬೇಕಿರುವುದು ಹೊಸ ಕಲ್ಪನೆಗಳಿರುವ ನವ ನಿರ್ದೇಶಕರು. ಅಂದರೆ ಓಂ ಚಿತ್ರ ನಿರ್ದೇಶಿಸಿದ್ದ ಆಗಿನ ಬಿಸಿ ರಕ್ತದ ಉಪೇಂದ್ರರಂತಹವರು ನಮಗೆ ಬೇಕಾಗಿದ್ದಾರೆ.

Labels: ,

Thursday, November 01, 2007

ಯಾರಿಗೆ ಬೇಕ್ರೀ ಕನ್ನಡ

ನವೆಂಬರ್ ಒಂದು ಬಂದ್ರೆ ಕನ್ನಡುದ್ ಬಗ್ಗೆ ಯಾವ್ದಾದ್ರ್ ಒಂದ್ ಬರ್ದು ಹಾಕ್ದಿದ್ರೆ ತಿಂದುಂಡ್ ಅನ್ನ ಜೀರ್ಣ ಆಗೋದಿಲ್ಲಪ್ಪೋ. ಮಿಕ್ಕಿದ್ ದಿನ ಏನಾದ್ರೂ ಎಕ್ಕುಟ್ಟೋಗ್ಲೀ ನಮ್ಗೆಲ್ಲಾ ನವೆಂಬರ್ ಒಂದ್ ಮಾತ್ರ ಕನ್ನಡದ್ ನೆನ್ಪು ಬತ್ತೈತೆ. ಹಂಗಾಗಿ ಬ್ಲಾಗಿಗೆ ಏನಾದ್ರೂ ಬರುದ್ ಹಾಕ್ಬೇಕಂತ ಯೋಚ್ನೆ ಬಂತು. ಟೇಮಿಗ್ ಕರೆಕ್ಟಾಗಿ ಬರ್ಯೋಕೆ ತಲೆ ಓಡ್ಬೇಕಲ್ಲಾ... ಊಹುಂ... ಯಾವಾಗ್ಲೋ ಕಾಲೇಜ್ ಕಿಲಾಸಿಗ್ ಹೋಗ್ತಿದ್ದಾಗ ಬರ್ದಿದ್ನಲ್ಲಾ ಅದುನ್ನೇ ಹಾಕ್ಬುಟ್ಟು ಕೈತೊಳ್ಕೊಂಡ್ ಬುಟ್ಟೆ...


ಕನ್ನಡ ಕನ್ನಡ
ಅಂತ ಕನವರಿಸಿದ್ರ
ಕೇಳ್ತಾರ
ಯಾಕೆ ಸ್ವಾಮಿ ಕನ್ನಡ?
ಯಾರಿಗೆ ಸ್ವಾಮಿ ಕನ್ನಡ?

ಓದೋ ಹೈಕ್ಳಿಗೆ
ಬೇಕ್ರೀ ಕನ್ನಡ
ಅಂತಂದ್ರ ಹೇಳ್ತಾರ
ಇಂಗ್ಲೀಷ್‌ನ ಎಬಿಸಿಡಿ
ಬರ್ತಾದ್ರಿ 'ಬೈ ಹಾರ್ಟು'
ಕನ್ನಡದ ಅಆಇಈ
ಕೊಡ್ತಾದ್ರಿ 'ಹಾರ್ಟ್ ಬ್ರೇಕು'

ಪ್ರೀತಿಯ ಸವಿನುಡಿಗೆ
ಬೇಕ್ರೀ ಕನ್ನಡ
ಅಂತಂದ್ರ ಹೇಳ್ತಾರ
ಇಂಗ್ಲೀಷ್‌ನ ಹೌ ಆರ್ ಯೂ
ಛಲೋ ಇದ್ರ
ಕನ್ನಡದಾಗ್ಯಾಕ್ರೀ
ಚೆನ್ನಾಗಿದ್ದೀರಾ

ಈ ನೆಲದ ಗುಣ
ಕನ್ನಡ ಅಂತಂದ್ರ
ಹೇಳ್ತಾರ ಗುಟ್ನಾಗ
ಇಂಗ್ಲೀಷ್ ಮ್ಯಾಲ್ ಕಾಣೋ
ಗಗನ ಕಣ್ರೀ
ಕನ್ನಡ ಕೆಳಗ್ ಕಾಣೋ
ನೆಲ ಮಾತ್ರ ಕಣ್ರೀ
ನಾವೆಲ್ಲಾ ಏರ್ಬೇಕ ಮ್ಯಾಲ
ಬ್ಯಾಗ್ ಹತ್ರಿ ಹತ್ರೀ