Thursday, November 15, 2007

ಸ್ಯಾಂಡಲ್‌ವುಡ್‌ಗೆ ನವನಿರ್ದೇಶಕರು ಬೇಕಾಗಿದ್ದಾರೆ

ಕತ್ತಿ, ಮಚ್ಚು, ಲಾಂಗು ಮತ್ತೀಗ ಗನ್ನು ಹಿಡಿದು ಅಲ್ಲಲ್ಲಿ ಪ್ರೀತಿ, ಪ್ರೇಮ, ತಾಯಿ, ಸ್ನೇಹ ಮುಂತಾದ ಸೆಂಟಿಮೆಂಟುಗಳನ್ನು ಸೇರಿಸಿ ಒಂದು ಫಾರ್ಮುಲಾ ತಯಾರಿಸಿ ಫ್ಯಾಕ್ಟರಿ-ಮೇಡ್ ಚಲನಚಿತ್ರಗಳನ್ನು ತೆಕ್ಕೆಗೆ ಹಾಕಿಕೊಂಡು ತೆರೆಗೆ ಅಪ್ಪಳಿಸುತ್ತಿರುವ ಕನ್ನಡ ಚಿತ್ರರಂಗ ಇದೀಗ ಏಕಮುಖ ಸಂಚಾರ ವ್ಯವಸ್ಥೆಯಲ್ಲಿದೆ. ಒಂದು ಚಿತ್ರ ಯಶಸ್ವಿಯಾಯಿತೆಂದರೆ ಅದರ ಯಾವುದಾದರೂ ಒಂದು ಅಂಶವನ್ನು ಸೂತ್ರದೊಳಗೆ ಸೇರಿಸಿ ಸರಿದೂಗಿಸುವ ನಮ್ಮ ಚಿತ್ರ ಕರ್ಮಿಗಳ ಉಜ್ವಲ ಕಲೆಯನ್ನು ಮೆಚ್ಚಿಕೊಳ್ಳಲೇಬೇಕು.

ಪಾತಕಿ ಲೋಕದ ಹಸಿ, ಬಿಸಿ ಮತ್ತು ಹಳಸು ಕತೆಗಳನ್ನು ಹೊಂದಿರುವ ಕನ್ನಡ ಚಿತ್ರಗಳು ಬೆಂಗಳೂರಿನಲ್ಲಿರುವ ಭೂಗತ ಜಗತ್ತಿನ ಹುಡುಗರ ಸಂಖ್ಯೆಯನ್ನೇ ಮೀರಿಸುವಂತೆ ದಿನೇ ದಿನೇ ಹುಲುಸಾಗಿ ಬೆಳೆಯುತ್ತಿವೆ. ಹಾಯ್ ಬೆಂಗಳೂರು, ಅಗ್ನಿ, ಲಂಕೇಶ್ ಪತ್ರಿಕೆಯಂತಹ 'ಉಗ್ರ'ಗಾಮಿ ಪತ್ರಿಕೆಗಳ ಸ್ಥಿತಿಯನ್ನು ಲೈಬ್ರರಿಗಳಲ್ಲಿ ನೋಡಿದರೇ ಚೆನ್ನ. ಆ ಪತ್ರಿಕೆಗಳು ಲೈಬ್ರರಿಗೆ ಪ್ರವೇಶವಾದ ಮೊದಲ ದಿನವೇ ಜನರ ಕೈ, ಕಣ್ಣಿಗೆ ಸಿಲುಕಿ ನುಜ್ಜುಗುಜ್ಜಾಗಿರುತ್ತವೆ. ಹಸಿ ಹಸಿ ರೌಡಿಸಂ ಕತೆಗಳನ್ನು ಓದಲು ಆ ಪತ್ರಿಕೆಗಳ ಮೇಲೆ ಕಿರಾತಕರಂತೆ ಎರಗುವ ಜನರು ಅಂತಹ ರೌಡಿಸಂ ಸಿನಿಮಾಗಳನ್ನು ಬಿಟ್ಟಾರೆಯೇ? ಟಿವಿ ಛಾನೆಲ್‌ಗಳಲ್ಲಿ ಕ್ರೈಂ ಪ್ರೋಗ್ರಾಂಗಳಷ್ಟು ಜನಪ್ರಿಯತೆ ಸಾಧಿಸಿರುವ ಕಾರ್ಯಕ್ರಮಗಳು ಇವೆಯೇ? ಧಾರಾವಾಹಿಗಳನ್ನು ನೋಡಲು ಹೆಂಗಳೆಯರು ಹಪಹಪಿಸುತ್ತಾರೆ; ಸಿನಿಮಾ, ಕ್ರೀಡೆ, ಸುದ್ದಿ ಇನ್ನೂ ಮುಂತಾದ ಕಾರ್ಯಕ್ರಮಗಳಿಗೆ ಬೇರೆ ಬೇರೆ ವೀಕ್ಷಕ ಬಳಗವಿದೆ; ಆದರೆ ಕ್ರೈಂ ಕಾರ್ಯಕ್ರಮಗಳಿಗೆ ಆ ಎಲ್ಲ ಬಹುತೇಕ ವರ್ಗಗಳ ಜನರು ತಪ್ಪದೇ ಮುಗಿಬೀಳುತ್ತಾರೆ.

ಸಿನಿಕ ಜನರ ಈ ನಾಡಿಯನ್ನು ಸುಲಭವಾಗಿ ಕಂಡುಹಿಡಿದ ಸ್ಯಾಂಡಲ್‌ವುಡ್ ತನ್ನ ಕತೆಗಳ ಸೂತ್ರಗಳಲ್ಲಿ ರೌಡಿಸಂ ಅನ್ನು ಆಧಾರ ಮಾಡಿಕೊಂಡಿರುವುದು ಅಚ್ಚರಿಯಲ್ಲ. ಒಂದೂವರೆ ದಶಕದ ಹಿಂದೆ ಒರಿಜಿನಲ್ ರೌಡಿಗಳನ್ನೇ ಹಾಕಿಕೊಂಡು ಉಪೇಂದ್ರ ತೆಗೆದ ಓಂ ಚಿತ್ರ ಭರ್ಜರಿ ಯಶಸ್ವಿಯಾದದ್ದೇ ಸ್ಯಾಂಡಲ್‌ವುಡ್‌ನಲ್ಲಿ ರೌಡಿಸಂ ಶಕೆ ಚಾಲನೆಗೊಂಡಿತು.

ಪ್ರತಿಯೊಬ್ಬ ರೌಡಿಯ ಹಿನ್ನೆಲೆಯಲ್ಲಿ ಹುಡುಗಿ ಅಪ್ಪಳಿಸಿ ಹೋಗುವುದರಿಂದ ಅಲ್ಲಲ್ಲಿ ರಕ್ತಭರಿತ ಪ್ರೇಮ ಕಾವ್ಯ ಸೃಷ್ಟಿಯಾಗುತ್ತವೆ. ರಕ್ತಸಿಕ್ತ ಸ್ಯಾಂಡಲ್‌ವುಡ್ 'ಲಾಂಗ್' ಕಥಾ ಸೂತ್ರಕ್ಕೆ ಪ್ರೇಮವೂ ತೂರಿಕೊಳ್ಳುತ್ತದೆ. ಹಲವಾರು ತವರಿನ ಕತೆಗಳು ಆಗಮಿಸಿ ಜನರ ಕಣ್ಣಲ್ಲಿ ನೀರು ಹನಿಕಿಸುವಷ್ಟು ಯಶಸ್ವಿಯಾಗಿರುವಾಗ ತಾಯಿ ಸೆಂಟಿಮೆಂಟು ಕೂಡ ಸ್ಯಾಂಡಲ್‌ವುಡ್ ಸೂತ್ರಕ್ಕೆ ಗಂಟುಹಾಕಿಕೊಳ್ಳುತ್ತದೆ. ರಕ್ತದ ಕೋಡಿ ಮತ್ತು ಕಣ್ಣೀರು ಕೋಡಿ ಬೆರೆತು ರಕ್ತ ಕಣ್ಣೀರುಗಳು ಸೃಷ್ಟಿಯಾಗುತ್ತವೆ. ಸಾಯಿಕುಮಾರರ ಅಕ್ಕನ್, ಅಮ್ಮನ್ ಪಂಚಿಂಗ್ ಡೈಲಾಗ್‌ಗಳಿಗೆ ಪಡ್ಡೆ ಹುಡುಗರ ಶಿಳ್ಳೆ ಬೆರೆತಾಗ ಚಿತ್ರಗಳಿಗೆ ಹಸಿಹಸಿ ಸಂಭಾಷಣೆಗಳು ಸಿದ್ಧವಾಗುತ್ತವೆ. ಸ್ಯಾಂಡಲ್‌ವುಡ್‌ನ ಈ ದಿಢೀರ್ ಸಿದ್ಧಸೂತ್ರಗಳಿರುವಾಗ ಕತೆ, ಚಿತ್ರಕತೆ, ನಟನೆ ಮತ್ತು ನಿರ್ದೇಶನಗಳು ಕೇವಲ ನಾಮಕಾವಸ್ತೆಗಷ್ಟೇ ಅಸ್ತಿತ್ವದಲ್ಲಿರುತ್ತವೆ.

ಹಾಲಿಹುಡ್ಡು, ಬಾಲಿವುಡ್ಡು, ಕೋಲಿವುಡ್ಡು, ಟಾಲಿವುಡ್ಡು, ಮೋಲಿವುಡ್ಡು ಅಥವಾ ಇನ್ಯಾವುದೇ ಚಿತ್ರರಂಗದಂತೆ ಸ್ಯಾಂಡಲ್‌ವುಡ್ ಕೂಡ ಸಿದ್ಧಸೂತ್ರಗಳಿಗೆ ಶರಣಾಗಿದೆ ಎಂಬುದು ನಿಜ. ಆದರೆ ಕೋಲಿವುಡ್ (ತಮಿಳು) ಮತ್ತು ಮೋಲಿವುಡ್ (ಮಲಯಾಳ) ಗಳಲ್ಲಿ ಚಿತ್ರಕತೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಟೋಲಿವುಡ್ (ತೆಲುಗು) ಚಿತ್ರಗಳಲ್ಲಿ ಹೀರೋಯಿಸಂ ಅರಿಭಯಂಕರವಾಗಿರುವುದಾರೂ ಅವುಗಳ ಚಿತ್ರೀಕರಣ ಶೈಲಿಗಳು ಅತ್ಯುನ್ನತ ಮಟ್ಟಕ್ಕೆ ಏರಿಬಿಟ್ಟಿವೆ. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಜೀತಸೇವೆ ಮಾಡಿ ಅನುಭವ ಗಳಿಸಿ ಪಕ್ವತೆ ಸಾಧಿಸಿದಂತೆ ಕಂಡುಬರುವ ಒಬ್ಬ ನಿರ್ದೇಶಕನಿಗಿಂತ ತಮಿಳಿನಲ್ಲಿ ಮೀಸೆ ಕೂಡ ಸರಿಯಾಗಿ ಬಲಿಯದ ಒಬ್ಬ ಹುಡುಗ ಸಾವಿರ ಪಾಲು ಉತ್ತಮವಾದ ಒಂದು ಚಿತ್ರವನ್ನು ತಯಾರಿಸುತ್ತಾನೆ. ಏಕೆ ಹೀಗೆ? ಉತ್ತರ ಸಿಗುವುದು ತುಸು ಕಷ್ಟಕರವೇ. ಉತ್ತರ ಬೇಕೆಂದಿದ್ದಲ್ಲಿ ನಾವು ಆ ಚಿತ್ರರಂಗದ ಹಿನ್ನೆಲೆ, ಮುನ್ನೆಲೆ, ಹಾಗೂ ಅದರ ಕರ್ಮಿಗಳ ದೃಷ್ಟಿಕೋನಗಳಲ್ಲಿ ಅಡಕವಾಗಿರುವ ಅಂಶಗಳನ್ನು ಕೆದಕಬೇಕಾಗುತ್ತದೆ. ಆದರೆ ಒಟ್ಟಾರೆ, ಚಿತ್ರ ನಿರ್ಮಾಣ ಒಂದು ಕಲೆ ಎಂಬ ಅಂಶ ಮಾತ್ರ ಸುಸ್ಪಷ್ಟ.

ಯಾವುದೇ ಚಿತ್ರದ ಜೀವಾಳವು ಅದರ ಚಿತ್ರಕತೆಯೇ ಆಗಿರುತ್ತದೆ. ನಟನೊಬ್ಬನ ನಟನೆಯಲ್ಲಿ ಲೋಪದೋಷಗಳಿದ್ದಲ್ಲಿ ಅದನ್ನು ಮರೆಮಾಚುವಂತೆ ದೃಶ್ಯೀಕರಿಸಬಲ್ಲ ಜಾಣ್ಮೆ ಇರುವಂತಹ ನಿರ್ದೇಶಕನು ಚಿತ್ರಕ್ಕೆ ಸೂತ್ರದಾರನಾಗುತ್ತಾನೆ. ಆದರೆ ಕನ್ನಡ ಚಿತ್ರಗಳು ತಮ್ಮವೇ ಸೂತ್ರಗಳಿಗೆ ಕಟ್ಟುಬಿದ್ದು ಸಾಗುವುದರಿಂದ ಅವುಗಳನ್ನು ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಕೆ ಮಾಡಿದಾಗ ಪೇಲವವಾಗಿ ಕಾಣುತ್ತವೆ. ಕನ್ನಡ ಚಿತ್ರಗಳಿಗಿಂತ ಕಡಿಮೆ ಬಜೆಟ್‌ಗಳನ್ನು ಹೊಂದಿರುವ ಮಲಯಾಳ ಚಿತ್ರಗಳ ಬಗ್ಗೆ ಯಾವುದೇ ಜನರೂ ಮೂಗು ಮುರಿಯುವುದಿಲ್ಲ. ಏಕೆಂದರೆ ಆ ಚಿತ್ರಗಳಲ್ಲಿರುವ ಸರಕಿನ ಗುಣಮಟ್ಟ ಅಂತಹದ್ದು. ನಾವು ಬೇರೆ ಬೇರೆ ಭಾಷೆಯ ಚಿತ್ರಗಳೊಂದಿಗೆ ಸ್ಪರ್ಧಿಸುತ್ತಿರುವಾಗ ಹೋಲಿಕೆ ಮಾಡುವ ಪ್ರಮೇಯ ಖಂಡಿತವಾಗಿ ಬರುತ್ತದೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಬಹಳ ಚಿಕ್ಕದು, ಕನ್ನಡಿಗರು ಕನ್ನಡ ಚಿತ್ರಗಳನ್ನು ನೋಡುವುದು ಕಡಿಮೆ ಮುಂತಾಗಿ ಕೇಳಿ ಬರುತ್ತಿದ್ದ ಅನುಮಾನಗಳಿಗೆ ಮುಂಗಾರು ಮಳೆ ಮತ್ತು ದುನಿಯಾ ತಕ್ಕ ಉತ್ತರ ನೀಡಿವೆ.

ಪ್ರತಿಯೊಂದು ಚಿತ್ರರಂಗಕ್ಕೆ ಅದರದ್ದೇ ಆದ ಶೈಲಿಗಳಿರುವುದರಿಂದ ಪರಸ್ಪರ ಹೋಲಿಕೆ ನಡೆಸುವುದು ಸರಿಯಲ್ಲ ಎಂಬ ವಿಚಾರ ಸರಿಯೇ. ಆದರೆ ಯಾವುದೇ ಶೈಲಿಯಿದ್ದರೂ ಗುಣಮಟ್ಟ ಎಂಬ ಒಂದು ನಿರ್ಣಾಯಕ ಅಂಶವಿರುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವಿವಿಧ ಪ್ರಾಕಾರಗಳಿವೆ. ಅವುಗಳಲ್ಲಿ ಯಾವ ಪ್ರಾಕಾರ ಸರಿ ಎಂಬ ಹೋಲಿಕೆ ತರವಲ್ಲ ಎಂಬುದು ನಿಜ. ಆದರೆ ಆಯಾ ಪ್ರಾಕಾರಗಳಲ್ಲಿರುವ ಸಾಹಿತ್ಯದ ಸರಕು ಎಷ್ಟು ಗುಣಮಟ್ಟವುಳ್ಳದ್ದು ಎಂಬುದು ಮುಖ್ಯ. ಹಾಗೆಯೇ ಚಲನಚಿತ್ರಗಳಲ್ಲೂ ಕೂಡ.

ಸ್ಯಾಂಡಲ್‌ವುಡ್‌ಗೆ ಪ್ರಸಕ್ತ ಬಿಸಿರಕ್ತಗಳು ಹರಿಯಬೇಕಿವೆ. ಅಂದರೆ ಮಚ್ಚು, ಲಾಂಗುಗಳ ಕತೆಗಳಲ್ಲಿ ಹರಿಸುವ ಬಿಸಿನೆತ್ತರುಗಳಲ್ಲ. ಬಿಸಿ ರಕ್ತದ ಯುವ ನಟರು ಈಗಾಗಲೇ ತೆರೆಗೆ ಒಡ್ಡಿಕೊಂಡಿದ್ದಾರಾದರೂ ನಮಗೆ ಈಗ ಬೇಕಿರುವುದು ಹೊಸ ಕಲ್ಪನೆಗಳಿರುವ ನವ ನಿರ್ದೇಶಕರು. ಅಂದರೆ ಓಂ ಚಿತ್ರ ನಿರ್ದೇಶಿಸಿದ್ದ ಆಗಿನ ಬಿಸಿ ರಕ್ತದ ಉಪೇಂದ್ರರಂತಹವರು ನಮಗೆ ಬೇಕಾಗಿದ್ದಾರೆ.

Labels: ,

4 Comments:

Blogger Shiv said...

ಸಾರಥಿಯವರೇ,

ಒಪ್ಪುವಂತಹ ಮಾತು..ನಿಜಕ್ಕೂ ನಿರ್ದೇಶಕರು ಬೇಕಾಗಿದ್ದರೆ.
ಸಂತೆಯಲ್ಲಿ ಕೂತು ಮೂರು ಮೊಳ ನೇಯುವುದು ಕನ್ನಡ ಸಿನಿಮಾರಂಗದ ಕತೆಯಾಗಿದೆ.

ಒಂದು ಸಮಾಧಾನದ ವಿಷಯವೆಂದರೆ ಈಗೀಗ..ಕೆಲವಾದರೂ ನವ ತಲೆಗಳು..ಹೊಸವಿಚಾರಗಳು ಬರ್ತಿವೆ

10:47 AM  
Anonymous Anonymous said...

ಹೌದು ಶಿವಶಂಕರ್ ಅವರೇ, ಆದರೆ, ತೆಲುಗಿನಲ್ಲಿ ಹೀರೋಯಿಸಂ ಭೂತ ಹಿಡ್ಕೊಂಡಿರೋ ಥರ ಕನ್ನಡದಲ್ಲೂ ರೌಡಿಸಂ ಅನ್ನೋದು ಕೂತ್ಕೊಂಡ್ ಬಿಟ್ಟಿದೆ. ಬರುವ ಹೊಸಬರೂ ಅದುನ್ನೇ ತಳಪಾಯ ಮಾಡ್ಕೊಂಡು ಕಥೆ ಮಾಡ್ತಾರೆ. ಇದೇ ಒಂದು ವಿಪರ್ಯಾಸ.

11:51 AM  
Blogger ಸತೀಶ್ said...

ಭಾಳ ಚಂದ ಬರ್ದಿರಿ ನೊಡ್ರಿ ಸ್ವಾಮ್ಯಾರ ಅಲ್ರಿ ಪಿಚ್ಚರ ಅಂದ್ರ ಬೆಂಗಳೂರ ಅಲ್ಲರಿ ನಾವ್ ಏನ.. ಮಾಡಿದವ್ರಿ. ಅದ್ ಬ್ಯಾಡ ಬಿಡ್ರಿ. ಅಲ್ಲರಿ ಚೆಂದಾಗಿ ಒಂದೇರಡ ಸಿನಿಮಾ ಮಾಡ್ರಿ ಅಂದ್ರ ಬರೆ ಹೊಡದಾಡುದ ಇರ್ತೈತಿ.

4:35 PM  
Blogger ಸತೀಶ್ said...

ಬೋ ಸೇಂದಾಕೈತಿ ಸ್ವಾಮಿ. ಏನ ನಡಿಯಾಕತ್ತೈತೆ. ಅದ್ನ ಸೇಂದಾಕ್ ಹೆಳವರ್ರಿ

4:37 PM  

Post a Comment

<< Home