Friday, May 05, 2006

ಡಿಕೆಶಿ ರಾಜಕೀಯ ಪ್ರಸಂಗ; ಒಂದು ಸಂದರ್ಶನ

"ದೇವೇಗೌಡರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ" ಎಂದು ಕರ್ 'ನಾಟಕ'ದ 'ಹ್ಯಾಂಗ್ರೀ ಮ್ಯಾನ್' ಡಿ.ಕೆ. ಶಿವಕುಮಾರ್ ಅವರು ಮೇ 4ರಂದು ಚೆನ್ನೈನಲ್ಲಿ ಉದಯ ಟಿವಿಯೊಂದಿಗೆ ಪರಿತಪಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿನ್ ವಿನ್ (ಕನ್ನಡದಲ್ಲಿ WIN TV ಸ್ಥಾಪನೆ) ಎಂದು ಹೇಳಿ ಹೇಳಿ ಶಿವಕುಮಾರ್ ಸುಸ್ತಾಗಿ ಕೊನೆಗೆ ವಿನ್ ಆಗದೆಯೇ ಸೋಲೊಪ್ಪಿದರು. ಇತ್ತ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ವಿನ್ ಆಗದೇ ಪತನಗೊಂಡಾಗ ಡಿಕೆಶಿ ಪರದೇಶಿ ಆಗಬೇಕಾಯಿತು. ಆದರೆ ತಮಿಳುನಾಡಿನಲ್ಲಿ ಕಾಂಗ್ರೆಸ್ಸನ್ನು ವಿನ್ ಮಾಡಲು ಶಿವಕುಮಾರ್ ಅವರನ್ನು ಛೂ ಬಿಟ್ಟಿರುವುದು ನಿಗೂಢವಾಗಿಯೇ ಇದೆ. ತಮಿಳುನಾಡಿನ ಚುನಾವಣೆಯಲ್ಲಿ ಕಲೈನಾರ್ ಮತ್ತು ಅಮ್ಮಗಳ ಆರ್ಭಟಗಳ ಮಧ್ಯೆ ಡಿಕೆಶಿ ಅವರ ವಿನ್ ವಿನ್ ಮಂತ್ರ ಕೇಳುವುದಿಲ್ಲ ಎಂಬ ಗಂಡೆದೆ ಭಂಡ ಧೈರ್ಯ ಕಾಂಗ್ರೆಸ್ಸಿಗೆ ಇದ್ದಿರಬಹುದು.

ಹಿನ್ನೆಲೆ: ಕರ್ನಾಟಕದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿ ಒಂದು ಹೂ-ಮುಳ್ಳು ಆಗಿದ್ದರು. ಇಂತಹ ಸುಂದರ ಹೂವನ್ನು ಕಿತ್ತು ದಾನ ಮಾಡುವಂಥ ಸತ್ಕಾರ್ಯಕ್ಕೆ ಓಲ್ಡ್ ಮ್ಯಾನ್ ದೇವೇಗೌಡರು ಕೈಹಾಕಿದ್ದರು. ಇಂತಹ ಸತ್ಕರ್ಮಿಯು ಹೂ ಕೀಳುವಾಗ ಅದರೊಂದಿಗಿದ್ದ ಮುಳ್ಳು ಚುಚ್ಚಿಬಿಟ್ಟರೆ ಏನಾಗಬೇಡ? ಮುಳ್ಳುಚುಚ್ಚಿದ ನೋವಿನಲ್ಲಿ ದೇವೇಗೌಡರು ಕಿಟಾರನೇ ಕಿರುಚಿದ ಶಬ್ದಕ್ಕೆ ಇಡೀ ಹೂದೋಟ ಮಾಲಿಕರು ಥರಥರ ನಡುಗಬೇಕಾಯಿತು. ಅಲ್ಲದೆ, 'ದೇವ'ರಿಗೇ ಬಂತಾ ವಿಪತ್ತು ಎಂದು ಕಂಗೆಟ್ಟ ದೇವೇಗೌಡ ಬೆಂ'ಬಲಿ'ಗರು ಹರಿಸಿದ ಕಟುನೀರಿನ ಕೋಡಿಗೆ ಹೂದೋಟವೇ ಮುಳುಗಿಹೋಗಿತ್ತು.

ಆದರೇನು, ಬಿಸಿಲಿನ ಝಳಕ್ಕೆ ಮುರುಟಿ ಹೋಗಲಿದ್ದ ಬಿಜೆಪಿಯ ಕಮಲ ಕೈಗೆ ಸಿಕ್ಕ ಮೇಲೆ ದೇವೇಗೌಡರು ನಿರುಮ್ಮಲರಾಗಿದ್ದಾರೆ. ಕಮಲದ ಹೂವಿನ ಅಡಿಯಲ್ಲಿ ಮುಳ್ಳಿರಬಹುದೆಂಬ ಸಂದೇಹದಲ್ಲಿ ಅದಕ್ಕೆ ಕೈ ಹಾಕುವ ಸಾಹಸಕ್ಕೆ ದೇವೇಗೌಡರು ಈವರೆಗೆ ಹೋಗಿಲ್ಲ. ಮುಂದೆ ಸತ್ಯದ ಅರಿವಾಗಿ ದೇವೇಗೌಡರು ಕಾರ್ಯಾಚರಣೆ ಕೈಗೊಳ್ಳುವಾಗ ಸಚಿತ್ರ ವರದಿ ಸಲ್ಲಿಸಲು ಕನ್ನಡಸಾರಥಿ ಬಳಗ ಕಾದು ಕುಳಿತಿದೆ.

ಮುಂದೆ: ಏನು ಸ್ವಾಮಿ 'ತಲೆ'ಬರಹದಲ್ಲಿ "ಡಿಕೆಶಿ ರಾಜಕೀಯ ಪ್ರಸಂಗ" ಅಂತ ಇದೆ, ನೀವು "ಡಿಜಿ(ದೇವೇಗೌಡ) ರಾಜಕೀಯ ಪ್ರಹಸನ" ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದೀರೇನು? ಡಿಕೆಶಿ ಹುಟ್ಟಿದ್ದೇ ದೇವೇಗೌಡರ ಬೇಟೆಗಾಗಿ ಎಂಬ ಸುದ್ದಿ ಊಹಾಪೋಹಗಳ ವೇಗವನ್ನೂ ಮೀರಿ ಹಬ್ಬತೊಡಗಿದ್ದನ್ನು ಹಲವರು ಕಲ್ಪಿಸಿಕೊಂಡಿದ್ದಾರೆ.

ಕನ್ನಡದ ಖ್ಯಾತ ಬ್ಲಾಗಿಗರಾದ ಶ್ರೀರಾಮ್ ಅವರು ತಮ್ಮ ಬ್ಲಾಗ್‌ನಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರ ಹೋರಾಟದ ಭವಿಷ್ಯದ ಬಗ್ಗೆ ಸಂದೇಹ ತೋರ್ಪಡಿಸಿದ್ದರು. ಹಾಗೆಯೇ ನಮ್ಮ ಡಿಕೆಶಿ ಅವರು ದೇಗೌ ವಿರೋಧಿ ಆಂದೋಲನದ ನಂತರ ಮುಂದೇನು ಮಾಡುವರು ಎಂಬ ಬಗ್ಗೆ ನಮಗೆ ಜಿಜ್ಞಾಸೆ ಏರ್ಪಟ್ಟಿತು.

ಸರಿ ಹೇಗಿದ್ದರೂ ಡಿಕೆಶಿ ಅವರು ಚೆನ್ನೈನಲ್ಲೇ ಬಿಡಾರ ಹೂಡಿದ್ದಾರೆ, ಹೋಗಿ ಮಾತನಾಡಿಸೋಣ ಎಂದು ಸಕಲ ಕಲ್ಪನಾ ವಿಳಾಸಗಳೊಂದಿಗೆ ಡಿಕೆಶಿ ಭೇಟಿಯಾದೆವು. ಅದರ ವರದಿ ಇಂತಿದೆ...


ಕಸಾ: "ದೇವೇಗೌಡರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ" ಎಂದು ನೀವು ಇನ್ನೂ ದೂರುತ್ತಿದ್ದೀರಿ. ಅದರ ಬಗ್ಗೆ ವಿವರಣೆ ನೀಡುತ್ತೀರಾ?

ಡಿಕೆಶಿ: ರಾಮಕೃಷ್ಣ ಹೆಗಡೆ, ಜೆಎಚ್ ಪಟೇಲ್, ಸಿದ್ಧರಾಮಯ್ಯ ಮೊದಲಾದವರ ರಾಜಕೀಯ ಪುಟವನ್ನು ಮುಚ್ಚಿಹಾಕಿದ ದೇವೇಗೌಡರು ಈಗ ನನ್ನ ಮೇಲೆ ಕಣ್ಣಿಟ್ಟಿದ್ದಾರೆ. ನಾನು.....


ಕಸಾ: ಆದರೆ... ಹೆಗಡೆ, ಪಟೇಲರಂಥವರ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಿದ ದೇವೇಗೌಡರು ಈಗಾಗಲೇ ನಿಮ್ಮ ರಾಜಕೀಯ ಅಧ್ಯಾಯವೊಂದನ್ನು ಮುಕ್ತಾಯ ಮಾಡಿದ್ದಾರಲ್ಲ, ಇನ್ನು ಮತ್ತೆ ಮುಗಿಸುವುದೆಂತು?

ಡಿಕೆಶಿ: ಕೆಕ್ಕರಿಸುತ್ತಾ... ನಿಮ್ಗೆ ರಾ ಜ ಕೀ ಯ ಗೊತ್ತೇನ್ರೀ... ಹೆಗ್ಡೆ, ಪಟೇಲ್ರೂ ಅವರ್ನೆಲ್ಲಾ ಮುಗ್ಸಿದ್ದು ಆ ಗೌಡ ಅಲ್ಲ, ಅವ್ರೆಲ್ಲಾ ಆಗ್ಲೇ ಮುಗ್ದುಹೋಗಿದ್ರು... ಇವ್ರು ಕಿತ್ತಾಕಿದ್ದು ಏನೂ ಇಲ್ಲ...


ಕಸಾ: ಸರಿ, ದೇವೇಗೌಡರ ಮೇಲೆ ನಿಮ್ಮ ಮುಂದಿನ ಹೋರಾಟ ಹೇಗೆ?

ಡಿಕೆಶಿ: ಗೌಡ ಎಂಬ ರಾವಣನನ್ನು ಸಂಹಾರ ಮಾಡೋಕ್ಕಾಗಿ ಈ ಶಿವ ಹುಟ್ಟವ್ನೇ. ಗೌಡ್ರು ಇವತ್ತು ನಂಗೆ ಹೊಡ್ದಿರಬಹುದು. ಆದ್ರೆ ನಾನು ರಾವಣ ಇದ್ದಂಗೆ... ಒಂದು ತಲೆ ಹೋದ್ರೆ ಇನ್ನೂ ಬೇಜಾನ್ ತಲೆಗಳಿರ್ತವೆ....


ಕಸಾ: ಸಾರ್, ರಾವಣನ್ನ ಕೊಂದಿದ್ದು ಶಿವನೋ ರಾಮನೋ ಸ್ವಲ್ಪ ಕನ್ ಫ್ಯೂಸ್ ಆಗ್ತಿದೆ... ಹೋಗ್ಲಿ... ನೀವು ರಾವಣನ್ನ ಸಂಹಾರ ಮಾಡಕ್ಕೆ ಹುಟ್ಟಿದ್ದೀನಿ ಅಂದ್ರಿ, ಮತ್ತೆ ನಾನು ರಾವಣ ಇದ್ಹಂಗೆ ಅಂತೀರೀ... ಅರ್ಥ ಆಗ್ತಾನೇ ಇಲ್ಲ?

ಡಿಕೆಶಿ: ಅದ್ಕೆ ನಾನ್ ಹೇಳಿದ್ದು ನಿಮ್ಗೆ ರಾಜಕೀಯ ಅರ್ಥ ಆಗೊಲ್ಲ ಅಂತ... ನಿಮ್ಜೊತೆ ಬಡ್ಕೊಳ್ಳೋಕೆ ನಂಗೆ ಪುರುಸೊತ್ತಿಲ್ಲ. ಅಮ್ಮಾವ್ರ ಜೊತೆ ಮಾತಾಡ್ಬೇಕು...


ಕಸಾ: ಅಯ್ಯೋ, ನೀವು ಚೆನ್ನೈಗೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದೀರೋ ಇಲ್ಲಾ ಅಮ್ಮಾವ್ರ(ಜಯಲಲಿತಾ) ಪರ ಪ್ರಚಾರಕ್ಕೆ ಬಂದಿದೀರೋ ಗೊತ್ತಾಗ್ತಿಲ್ವೇ...

ಡಿಕೆಶಿ: ಅಮ್ಮಾವ್ರು(ಸೋನಿಯಾ) ಅಂದ್ರೆ ಕಾಂಗ್ರೆಸ್ಸು, ಕಾಂಗ್ರೆಸ್ಸಂದ್ರೆ ಅಮ್ಮಾವ್ರು... ಅಷ್ಟೂ ತಿಳೀದೇ ಇರೋ ಗುಗ್ಗು ಅಲ್ರೀ ನೀವು...


ಕಸಾ: ಸಾರ್ ಅಮ್ಮಾವ್ರು ಏಐಡಿಎಂಕೆ ಪಾರ್ಟಿ ಅಂತ ಸ್ವಲ್ಪ ನೆನಪಿದ್ದ ಹಾಗಿದೆ... ಅದ್ರೇ ಕನ್ ಫ್ಯೂಸು...

ಡಿಕೆಶಿ: ಆ ದೊಡ್ಡಮ್ಮಾವ್ರ ಮುಂದೆ ಈ ಚಿಕ್ಕವ್ವನ್ನ ಸುದ್ಧಿ ಎತ್ತುತ್ತೀಯಲ್ಲೋ ಪೆಕ್ರಾ.


ಡಿಕೆಶಿ ಗುಡುಗಿದ ಸದ್ದಿಗೆ ನರಗೆಟ್ಟು ಓಟ ಕೀಳಬೇಕಾಯಿತು.....

4 Comments:

Blogger bhadra said...

ಬಹಳ ಚೆನ್ನಾಗಿ ಬರೆದಿದ್ದೀರಿ. ಇದೇ ತರಹದ ಒಂದು ಅಣುಕು ನಾಟಕ ಬರೆಯಿರಿ. ಬಹಳ ಚೆನ್ನಾಗಿರುತ್ತದೆ.

8:17 AM  
Blogger Anveshi said...

ಕೇಳಿ ಸಾರಥಿ,
ನೀವು ಕೇಡಿ ಶವಕುಮಾರ್ ಗುಡುಗಿದ ಸದ್ದಿಗೆ ನಿಮ್ಮ ಕಸಾ ಎಲ್ಲಾ ಗಾಳಿಯಲ್ಲಿ ಎಗರಿ ನಮ್ಮ ಬೊಗಳೆಯ ಕಸದಬುಟ್ಟಿ ತುಂಬಿ ಬಿಟ್ಟಿದೆಯಲ್ಲಾ.... ಏನ್ಮಾಡೋದು?

7:07 PM  
Blogger Sarathy said...

ತವಿಶ್ರೀಗಳೇ, ನೀವು ಹೇಳಿದ ಮೇಲೆ ಬರೀಬೇಕು ಅನಿಸ್ತಿದೆ..

3:21 PM  
Blogger Sarathy said...

ಅನ್ವೇಷಿಗಳೇ ಕಸಾ ಅನ್ನು ಮೊದಲು ಎತ್ತಿ ಶೋಕೇಸ್ ನಲ್ಲಿ ಇಡಿ. ಇಲ್ಲದಿದ್ದರೆ ನಿಮ್ಮ ಕಸದ ಬುಟ್ಟಿ ಎಲ್ಲಾ ಸ್ವಚ್ಛವಾದೀತು.

3:23 PM  

Post a Comment

<< Home