Monday, May 15, 2006

ಕನ್ನಡ-ಎಫ್ಎಂ ಅಪಚಾರ, ವಿಚಾರ

-ಬೆಂಗಳೂರಿನಲ್ಲಿ ಮುಂಚಿನಿಂದಲೂ ಕನ್ನಡಕ್ಕೆ ಹೀನಾಯ ಪರಿಸ್ಥಿತಿ ಇದೆ. ಕನ್ನಡಿಗರಿಗಿಂತ ಅನ್ಯ ಭಾಷಿಕರೇ ಪ್ರಾಬಲ್ಯ ಮೆರೆದಿದ್ದಾರೆ.

-ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟುವಿನಂತಹ ಪ್ರಮುಖ ಕ್ಷೇತ್ರಗಳಲ್ಲಿ ಕನ್ನಡಿಗರು ಹೇಳಹೆಸರಿಲ್ಲದಂತಾಗಿದ್ದಾರೆ.

-ಒಬ್ಬ ಸಾಮಾನ್ಯ ವ್ಯಕ್ತಿಯು ಕನ್ನಡದ ಅಆಇಈ ಗೊತ್ತಿಲ್ಲದೆಯೇ ತನ್ನ ಇಡೀ ಜೀವಮಾನವನ್ನು ಬೆಂಗಳೂರಿನಲ್ಲಿ ಕಳೆಯಬಲ್ಲ.

-ಬೆಂಗಳೂರಿನಲ್ಲಿ ಕನ್ನಡದ ಚಿತ್ರಗಳಿಗಿಂತ ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರು ಮುಗಿಬೀಳುತ್ತಾರೆ.

-ಇಂತಹ ಹತ್ತುಹಲವು ವೈಪರೀತ್ಯಗಳಿಂದಾಗಿ ಬೆಂಗಳೂರಿನ ಕನ್ನಡಿಗರಲ್ಲಿ ಅಭದ್ರತೆಯ ಭಾವನೆ ಬೇರೂರಿದೆ. ಈ ಅಭದ್ರತಾ ಭಾವನೆಗಳು ಅವರನ್ನು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ. ಅನ್ಯ ಭಾಷಿಕರ ವಿರುದ್ಧ ಒಳಗೊಳಗೆಯೇ ಅಸಹನೆ ಏರ್ಪಟ್ಟಿದೆ.

ಡಾ. ರಾಜ್‌ಕುಮಾರ್ ನಿಧನಾನಂತರ ನಡೆದ ಘಟನೆಗಳ ಬಗ್ಗೆ ಚನ್ನೈನ ಕೆಲವು ಮಂದಿ ನನ್ನೊಂದಿಗೆ ಚರ್ಚೆ ನಡೆಸಿದ್ದರು. ಮೇಲೆ ತಿಳಿಸಿರುವ ವಿಚಾರಗಳು ಅವರ ವಿಶ್ಲೇಷಣೆಯ ರೂಪವಷ್ಟೇ.

ರಾಷ್ಟ್ರದ ಸಾಫ್ಟ್‌ವೇರ್ ಅಡ್ಡೆಯಾಗಿರುವ ಬೆಂಗಳೂರು ಈಗೀಗ ಬೇರೆ ಬೇರೆ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಟ್ರಾಫಿಕ್, ನಗರದ ಬೀದಿ ಕಾಳಗಗಳು, ಇತ್ತೀಚಿನ ಡಾ. ರಾಜ್ ನಿಧನಾನಂತರದ ಘಟನೆಗಳು ಇತ್ಯಾದಿಗಳಿಂಗಾಗಿ, ಹೊರಗಿನವರ ಕಣ್ಣುಗಳು ಬೆಂಗಳೂರನ್ನು ನೋಡುತ್ತಿರುವ ದೃಷ್ಟಿಯೇ ಬದಲಾಗಿದೆ.

ಬೆಂಗಳೂರಿನ ಜನ ಅಸಹಿಷ್ಣುಗಳು; ಅವರಿಗೆ ಟ್ರಾಫಿಕ್ ಸಮಸ್ಯೆಯ ಚಿಂತೆ ಇಲ್ಲ, ಆದರೆ ಕನ್ನಡದ ಬಗ್ಗೆ ದುರಭಿಮಾನ ಇದೆ... ಹೀಗೇ ಆರೋಪಗಳು, ಚರ್ಚೆಗಳು ನಡೆಯುತ್ತವೆ.

ಇವಿಷ್ಟೂ ನಮ್ಮನ್ನು ಚಿಂತೆಗೀಡು ಮಾಡುತ್ತದೋ, ವಿಚಾರಗಳಿಗೀಡು ಮಾಡುತ್ತದೋ, ಪ್ರತಿಭಟನೆಗೀಡು ಮಾಡುತ್ತದೋ ಗೊತ್ತಿಲ್ಲ. ಈ ಆರೋಪಗಳು ಎಷ್ಟು ಸತ್ಯವೋ ಮಿಥ್ಯವೋ ಎಂಬುದನ್ನು ಬೆಂಗಳೂರಿಗರೇ ನಿರ್ಧರಿಸಬೇಕು. ಇಷ್ಟು ದಿನ ಹೊರಗಿನವರಿಗೆ ತನ್ನ ತಾಯಿಮಡಿಲಿನ ಆಸರೆಗೆ ಅವಕಾಶ ಒದಗಿಸಿದ ಕನ್ನಡಿಗರೇ ಸಮಾಧಾನ ಚಿತ್ತಹೊಂದಿರಿ...

ಎಫ್ಎಂ-ಎಫ್ಎಂ: ಇದೇ ವಿಚಾರಗಳ ಗುಂಗಿನಲ್ಲಿರಬೇಕಾದರೆ ನನಗೊಂದು ಇ-ಮೇಲ್ ಬಂದಿತು. ಬೆಂಗಳೂರಿನ ಖಾಸಗಿ ಎಫ್ಎಂ ಸ್ಟೇಶನ್‌ಗಳಲ್ಲಿ ಕನ್ನಡದ ನಿರ್ಲಕ್ಷವನ್ನು ವಿರೋಧಿಸಿ ಸಹಿ ಸಂಗ್ರಹಿಸುವ ತಾಣವೊಂದರ ಲಿಂಕ್ ಅದರಲ್ಲಿತ್ತು. ಪ್ರಾಯಶಃ ನಿಮಗೂ ಆ ಇ-ಮೇಲ್ ತಲುಪಿರಬಹುದು. ಸಹಿ ಸಂಗ್ರಹ ನೋಡಲು ಅಥವಾ ಅದರಲ್ಲಿ ನೀವು ಭಾಗವಹಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.

http://www.PetitionOnline.com/protstfm/

ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದು ನೆನಪಿದೆ. ಬೆಂಗಳೂರು ಒಂದು ಕಾಸ್ಮೋಪೊಲಿಟನ್ ನಗರ; ಇಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ ಜನರೂ ಇದ್ದಾರೆ; ಅವರೆಲ್ಲರಿಗೂ ಅರ್ಥವಾಗುವ ಸಾಮಾನ್ಯ ಭಾಷೆ ಹಿಂದಿಯಾದ್ದರಿಂದ ಎಫ್ಎಂ ಚಾನೆಲ್‌ಗಳಲ್ಲಿ ಹಿಂದಿಗೆ ಒತ್ತುನೀಡುತ್ತಿದ್ದೇವೆ ಎಂದು ಖಾಸಗಿ ಎಫ್ಎಂ ಚಾನೆಲ್‌ಗಳ ವಿಚಾರ ಮುಂದಿಟ್ಟಿದ್ದವು.

ಈ ವಿಚಾರ ಏನೇ ಇರಲಿ, ಇವೇ ಖಾಸಗಿ ಚಾನೆಲ್‌ಗಳು ಚೆನ್ನೈನಲ್ಲೂ ಇದ್ದಾವೆ. ಆ ನಗರದಲ್ಲೂ ಅನ್ಯಭಾಷಿಕರು ಸಾಕಷ್ಟಿದ್ದಾರೆ. ಒಂದು ಲೆಕ್ಕದ ಪ್ರಕಾರ ಚೆನ್ನೈನಲ್ಲಿ ಶೇ 50 ಮಂದಿ ಹೊರಗಿನ ಮೂಲದವರೇ ಆಗಿದ್ದಾರೆ. ಇಂತಹ ಚೆನ್ನೈನಲ್ಲಿ ಎಲ್ಲಾ ಎಫ್ಎಂ ಚಾನೆಲ್‌ಗಳು ಬಹುತೇಕ ತಮಿಳು ಹಾಡುಗಳನ್ನೇ ಪ್ರಸಾರ ಮಾಡುತ್ತವೆ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ತಮಿಳು ಭಾಷೆಯಲ್ಲೇ ಮಾಡುತ್ತವೆ. ಅವರ ಕಾರ್ಯಕ್ರಮ ನಿರೂಪಣೆಯಲ್ಲಿ ವಿವಿಧ ವೈಶಿಷ್ಟ್ಯಗಳ ಮಿಶ್ರಣವಿರುತ್ತದೆ. ಚೆನ್ನೈ ಆಡು ಭಾಷೆ, ವಿವಿಧ ಗ್ರಾಮ್ಯ ಸೊಗಡಿನ ತಮಿಳು ಭಾಷೆ, ಪರಿಶುದ್ಧ ತಮಿಳು ಭಾಷೆ ಹೀಗೆ ವಿಶಿಷ್ಟವಾಗಿರುವ ನಿರೂಪಣೆಯನ್ನು ಕೇಳುವುದಕ್ಕೆ ನನ್ನಂತಹ ಅನ್ಯಭಾಷಿಕನಿಗೇ ಖುಷಿಯಾಗುತ್ತದೆ. ತಮಿಳು ಎಂದು ನಾನು ಎಂದೂ ಮೂಗುಮುರಿದಿಲ್ಲ.

ಬೆಂಗಳೂರಿನ ಖಾಸಗಿ ಎಫ್ಎಂ ಚಾನೆಲ್‌ಗಳಿಗೆ ಕನ್ನಡದ ಅಲರ್ಜಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಹಿಂದಿ ಭಾಷೆ ಬಗೆಗೆ ಕನ್ನಡಿಗರಿಗೆ ಇರುವ ವಿಶೇಷ ಒಲವು ಈ ಚಾನೆಲ್‌ಗಳಿಗೆ ಸುಗ್ರೇಸಾಗಿದೆ. ವಿಶಿಷ್ಟ ನಿರೂಪಣೆಯಿದ್ದರೆ ಅನ್ಯ ಭಾಷಿಕನು ಕೂಡ ಕನ್ನಡ ಹಾಡುಗಳನ್ನು ಕೇಳಿ ಆನಂದಿಸಬಲ್ಲ. ಕನ್ನಡದ ಹಾಡುಗಳನ್ನು ಕೇಳುವ ಶ್ರೋತೃಗಳು ಹೆಚ್ಚಾದಷ್ಟೂ ಕನ್ನಡ ಸಂಗೀತ ಕ್ಷೇತ್ರಕ್ಕೆ ಉತ್ತೇಜನ ದೊರೆತಂತಾಗುತ್ತದೆ.

ಈ ವಿಚಾರಗಳಲ್ಲಿ ನನಗೆ ಮೇಲ್ನೋಟಕ್ಕೆ ಕಂಡುಬಂದ ಅನಿಸಿಕೆಗಳಷ್ಟನ್ನೇ ಇಲ್ಲಿ ಯಥಾವತ್ತಾಗಿ ಬರೆದಿದ್ದೇನೆ. ಇದರ ಬಗೆಗೆ ಚರ್ಚೆ ನಡೆದಷ್ಟೂ ಒಳ್ಳೆಯದು ಎಂಬ ಅಭಿಪ್ರಾಯ ನನ್ನದು.

11 Comments:

Anonymous Anonymous said...

ಬಹುಶ: ನೀವು ಈ ಟಿಪ್ಪಣಿ ಬರೆಯುವಾಗ ಕೇವಲ ರೇಡಿಯೊ ಸಿಟಿ (91 MHz ಕಂಪನಾಂಕ) ಮಾತ್ರ ಇತ್ತು. ಅದರಲ್ಲಿ ನೀವು ಹೇಳಿದ ರೀತಿಯಲ್ಲಿ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿಯೇ ಹೆಚ್ಚು ಕಾರ್ಯಕ್ರಮಗಳು ಇದ್ದವು. ಈಗ ರೇಡಿಯೊ ಮಿರ್ಚಿ (93 MHz ಕಂಪನಾಂಕ) ಎಂಬ ಮತ್ತೊಂದು ಚಾನೆಲ್ ಬಂದಿದೆ. ಅದರ ಪ್ರಚಾರ ಕ್ರಿಯೆಯಲ್ಲಿ ಬೆಂಗಳೂರಿನ ಆಡುಭಾಷೆಯ ವಾಕ್ಯ 'ಸಕತ್ ಹಾಟ್ ಮಗಾ' ಬಳಸಿದ್ದಾರೆ. ಅವರ ಹೆಚ್ಚಿನ ಕಾರ್ಯಕ್ರಮಗಳು, ಜಾಹಿರಾತುಗಳು ಕನ್ನಡದಲ್ಲೇ ಇವೆ. ಹೀಗಾಗಿ ಅವರು ಕನ್ನಡಿಗರ ಮನ ಮೋಡಿ ಮಾಡಿದ್ದಾರೆ. ಆಟೊ ಡ್ರೈವರಗಳು, ಗೃಹಿಣಿಯರು, ವಿದ್ಯಾರ್ಥಿಗಳು...ಹೀಗೆಯೇ ಅದರ ಕೇಳುಗರ ಸಂಖ್ಯೆ ಹೆಚ್ಚುತ್ತಿದೆ.

ನಾವಷ್ಟೆ ಅಲ್ಲ, ಇದನ್ನು ಎಲ್ಲ ಕಂಪನಿಗಳು ಕೂಡ ನೋಡುತ್ತಿರುತ್ತವೆ. ಅವರು ತಮ್ಮ ಜಾಹಿರಾತನ್ನು ಹೆಚ್ಚು ಕೇಳುಗರಿಗೆ ತಲುಪಿಸಲು ಜನಪ್ರಿಯ ಮಾಧ್ಯಮ ಬಳಸುತ್ತಾರೆ. ಯಾವ ಚಾನೆಲ್ ಜನರ ಆಡು ಭಾಷೆ ಉಪಯೋಗಿಸಿ ಹೆಚ್ಚು ಜನರನ್ನು ತಲುಪಬಲ್ಲುದೋ ಅದೇ ಗೆಲ್ಲುತ್ತದೆ (Survival of the Fittest). ಈಗಾಗಲೆ ಈ ಸಮರ ಆರಂಭವಾಗಿದೆ. ಫಲಿತಾಂಶಕ್ಕಾಗಿ ಇನ್ನು ಬಹಳ ಹೊತ್ತು ಕಾಯಬೇಕಾಗಿಲ್ಲ ಎಂದು ನನ್ನ ಭಾವನೆ.

10:15 AM  
Blogger Sarathy said...

ಅನಾಮಧೇಯರೇ, ಒಳ್ಳೆಯ ಸುದ್ದಿ ಹೇಳಿದಿರಿ. ರೇಡಿಯೋ ಮಿರ್ಚಿ ಬಗ್ಗೆ ನನಗೆ ತಿಳಿದಿರುವುದು www.petitiononline.com/ptotstfm/ ನಲ್ಲಿ ಓದಿಯಷ್ಟೇ. ಚೆನ್ನೈನಲ್ಲಿರುವ ರೇಡಿಯೋ ಮಿರ್ಚಿ ಹಾಗೂ ಇತರ ಚಾನೆಲ್‌ಗಳೂ ಕೂಡ ಆಡು ಮಾತಿನ ತಮಿಳು ಭಾಷೆಗೆ ಒತ್ತು ನೀಡುತ್ತದೆ. ಬೆಂಗಳೂರಿನ ರೇಡಿಯೋ ಸಿಟಿಯಲ್ಲಿ ಉತ್ತಮ ಗುಣಮಟ್ಟದ ನಿರೂಪಣೆ ಇದೆ, ಆದರೆ ಬರೇ ಇಂಗ್ಲೀಷಿನಲ್ಲಿರುತ್ತದೆ. ನನ್ನಂತಹ ಮಧ್ಯಮ ವರ್ಗದ ಜನರು ತಪ್ಪದೇ ಕೇಳುತ್ತಾರೆ. ಆದರೆ ಕೆಳ ಕೆಳಮಧ್ಯಮ ವರ್ಗದವರು?

11:47 AM  
Blogger ಪವ್ವಿ said...

ಇಲ್ಲಿ ಇರುವ ಮುಖ್ಯ ವಿಷಯವೇ ಬೇರೆ..
ಖಾಸಗಿ ಎಫ್ಂ ಚಾನೆಲ್‍ಗಳು ಬೆಂಗಳೂರಿಗೆ ಬಂದಿರುವುದು ಕನ್ನಡ ಉದ್ಧಾರಕ್ಕೆ ಅಲ್ಲ. ಇದನ್ನು ರೇಡಿಯೋ ಮೆಣಸಿನಕಾಯಿಯ ನಿರ್ದೇಶಕರು ಈಗಾಗಲೇ ಹೇಳಿದ್ದಾರ. ನಾವು ಕನ್ನಡ ಹಾಕುವದಿಲ್ಲ, ಅದು ನಮ್ಮ ಆದ್ಯತೆ ಅಲ್ಲ, ಅದಕ್ಕೆ ಮುಂದೆ ಬೇರೆಯವರು ಬರಬಹುದು ನಿಮಗೆ ಒಳ್ಳೆಯದಾಗಲಿ ಅಂತ.
ಹಿಂದಿ ಭಾಷೆಗೆ ಆದರೆ ಒಂದು ಬಾರಿ ಕಾಪಿರೈಟ್ಸ ತೆಗೆದುಕೊಂಡರೆ ಸಾಕು, ಭಾರತದ ೩೨ ಪ್ರದೇಶದಲ್ಲಿ ಹಾಕಬಹುದು,ಅದೇ ಕನ್ನಡಕ್ಕೆ ದುಡ್ಡು ಹಾಕುವುದು ಅವರ ಲಾಭದ ದೃಷ್ಟಿಯಲ್ಲಿ ಬರುವದಿಲ್ಲ,ಅದ್ದರಿಂದ ಕನ್ನಡ ಹಾಡು ಹಾಕಲು ಮುಂದೆ ಬಂದಿಲ್ಲ.
ಸಾಲದಕ್ಕೆ ನಮ್ಮ ಕನ್ನಡಿಗರಿಗೆ ಕೇಳುವ ಧೈರ್ಯವಿಲ್ಲ, ಹಿಂದಿ ಹಾಕಿದರೆ ಸಾಕು ಸುಮ್ಮನೆ ಕೇಳುತ್ತಾರೆ ಅಂತ ಅವರ ಅಂಬೋಣ.
ಹಾಗೂ ಕೇಳಿದರೆ, ಸಂಗೀತದ ಕಂಪೆನಿಗಳು ನಮಗೆ ಕೊಡೂತ್ತಿಲ್ಲ ಅಂತ ಬೇರೆಯವರ ಮೇಲೆ ಗೂಬೆ ಕೂರಿಸುತ್ತಾರೆ, ಅದು ನಿಒವಾಗಿದ್ದರೆ ವರ್ಲ್ಡ್ ಸ್ಪೇಸ್ ನ ಸ್ಪರ್ಶ ೨೪ ಗಂಟೆ ಕನ್ನಡ ಕಾರ್ಯಕ್ರಮಗಳನ್ನು ಹೇಗೆ ಪ್ರಸಾರ ಮಾದುತ್ತಿದೆ.

ಇವರು ಮಾತಿಗೆ ಕೇಳುವರಿಲ್ಲ, ಕನ್ನಡ ನೆಲ-ಜನ ಬೇಕು ಅಂದರೆ ಕನ್ನಡ ಹಾಕಿ ಇಲ್ಲವಾದರೆ ಬಿಟ್ಟು ಹೋಗಿ ಅಂತ ಖಡಾಖಂಡಿತವಾಗಿ ನಮ್ಮವರು ಹೇಳಬೇಕು.

2:32 PM  
Anonymous Anonymous said...

Hey earlybird! thanks for dropping by:)
haraTekaTTe has jus become active. do check our first post. thanku again:)

2:30 PM  
Blogger Sarathy said...

ಪವ್ವಿಯವರೇ, ನೀವು ಹೇಳಿದ್ದು ಸಂಪೂರ್ಣ ಖರೇ. ಇಂಥ ವಿಷಯಗಳಲ್ಲಿ ಕನ್ನಡಿಗರು ಸುಮ್ಮನಾದರೆ ಮುಂದಕ್ಕೆ ಸಡಿಲ ನೀಡಿದಂತಾಗುತ್ತದೆ. ಭಾಷಾಂಧರೆಂಬ ಬಿರುದು ಬಂದರೂ ಪರವಾಗಿಲ್ಲ, ಕನ್ನಡಿಗರು ಇಂಥವನ್ನು ವಿರೋಧಿಸಬೇಕು.

7:17 PM  
Blogger Sarathy said...

ಹರಟೆಕಟ್ಟೆಯಲ್ಲಿರೋ ಹಕ್ಕಿಗಳಲ್ಲೇ ಈಗಾಗ್ಲೇ ಜೋರಾಗಿ ಹೊಡ್ಕೋತ್ತಾ ಇದಾವೆ. ನನ್ನ ಕ್ಷೀಣ ಧ್ವನಿ ಕೇಳ್ತದ್ಯೇ?

7:21 PM  
Anonymous Anonymous said...

ಸಾರಥಿಗಳೇ,

ಎಲ್ಲಿಗೆ ಹೋದಿರಿ? ರೇಡಿಯೋ ಸಿಟಿ ಕಟ್ಟೆ ಮೇಲೆ ಕುಳಿತು ಧರಣಿ ಮಾಡ್ತಾ ಇದೀರೇನೋ ಅಂತ ಅನುಮಾನವಾಯಿತು :-)

5:17 PM  
Blogger Vishwanath said...

ನಮ್ಮ ಊರು ಎಷ್ಟು ಸು(ಕು)ರೂಪಿಯಾಗಿದೆ ಎಂದು ತಿಳಿಯಬೇಕಿದ್ದರೆ ಎತ್ತರ ಪ್ರದೇಶದ ಮೇಲೆ ಕುಳಿತು ನೋಡಿದರಷ್ಟೇ ಗೊತ್ತಾಗುತ್ತದೆ.

ಜಾಗತೀಕರಣದ ಈಗಿನ ದಿನಗಳಲ್ಲಿ ಎಲ್ಲಾ ಊರುಗಳಲ್ಲೂ ಅದರಲ್ಲೂ ಹುಬ್ಬಳ್ಳಿ, ಮಂಗಳೂರಿನಂಥ ನಗರಗಳು ಮತ್ತು ಚೆನ್ನೈ, ಮುಂಬೈನಂಥ ಮೆಟ್ರೋ ನಗರಗಳಲ್ಲಿ ಎಲ್ಲಾ ಭಾಷೆಯ ಜನ ಇರುತ್ತಾರೆ. ಈ ಎಲ್ಲ ಜನರ ಮಧ್ಯೆ ನಮ್ಮ ಭಾಷೆ-ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ.

ನಾನೂ ಕೂಡ ಚೆನ್ನೈನಲ್ಲಿ ವಾಸಿಸುತ್ತೇನೆ. ನಿಮಗೆ ತಮಿಳು ಇಷ್ಟವೋ ಅನಿಷ್ಟವೋ ಗೊತ್ತಿಲ್ಲ. ಆದರೆ ಇಲ್ಲಿನ ಎಲ್ಲಾ ರೇಡಿಯೊಗಳು ಪ್ರಸಾರ ಮಾಡುವುದು ಇದೇ ಭಾಷೆಯ ಕಾರ್ಯಕ್ರಮಗಳನ್ನೇ. ಪರಿಸ್ಥಿತಿ ಹೀಗಿರುವಾಗ ನನ್ನಂಥ ಅನ್ಯಭಾಷಿಕರಿಗೆ ತಮಿಳು ಕಲಿಯುವುದನ್ನು ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ.

ಆದರೆ ಇದೇ ಮಾತನ್ನೇ ನೀವು ಬೆಂಗಳೂರಿನ ಬಗ್ಗೆ ಹೇಳುವ ಹಾಗಿಲ್ಲ. ಅನ್ಯಬಾಷಿಕರಿಗೆ ಸ್ವಲ್ಪ ದಿನ ಕನ್ನಡ ಕಷ್ಟವಾಗಬಹುದು. ಆದರೆ ಅದೇ ರೂಢಿಯಾಗುತ್ತದೆ.

ನನ್ನ ಮುಂದಿರುವುದು ಒಂದೇ ಪ್ರಶ್ನೆ-ಚೆನ್ನೈನಲ್ಲಿ ಆಗಿರುವುದು ಬೆಂಗಳೂರಿನಲ್ಲಿ ಏಕೆ ಸಾಧ್ಯವಿಲ್ಲ?

6:47 PM  
Blogger Sarathy said...

ತುಳಸೀವನದ ಪರಿಪಾಲಕರಾದ ತ್ರಿವೇಣಿಯವರೇ, ತುಂಬಾ ತುಂಬಾ ಧನ್ಯವಾದಗಳು!! ಮನೆಯಲ್ಲಿ ಕಂಪ್ಯೂಟರ್ ಇಲ್ಲ. ಬ್ಲಾಗ್ ಕೆಲಸಗಳನ್ನು ಆಫೀಸಿನಲ್ಲಿ ಮಾಡ್ಬೇಕು. ಆಫೀಸಿನಲ್ಲಿ ಕೆಲವೊಮ್ಮೆ ಪ್ರಾಜೆಕ್ಟ್ ಗಳು ದಿಢೀರನೇ ಸಿಕ್ಕಾಪಟ್ಟೆ ಬಂದ್ಬಿಡ್ತಾವೆ. ಏನಾದರೂ ಗೀಚೋಣ ಅಂದ್ರೆ ಸಮಯ ಸಿಗೋದೇ ಇಲ್ಲ.

9:06 PM  
Blogger Sarathy said...

ವಿಶ್ವನಾಥರವರೇ, ನೀವು ಹೇಳಿದ್ದು ನಿಜ. ಈ ಅಧ್ವಾನಗಳಿಗೆ ಕಾರಣ ಕನ್ನಡ ಬಗೆಗಿನ ಕೀಳರಿಮೆ ಮತ್ತು ಇಂಗ್ಲೀಷ್ ಬಗೆಗಿನ ಮೇಲರಿಮೆ ಎಂದನಿಸುತ್ತದೆ.

9:11 PM  
Anonymous Anonymous said...

Yeah. I think this is a major problem.
It's not only rampant on Radio. It's the same case on the internet also. Although, we cannot qualify certain pages as Kannada. The use of Kannada is diminishing a lot. What is necessary is that people should start blogging in Kannada.
The first aspect of this is the technological one. And that is going to be passed by this new software, http://quillpad.in/kannada/
which makes it easy for beginners.
Then, as part of this tradition. People should start blogging in Kannada. The more the better.

Then alone, can we start claiming Radio city is ours!

1:43 PM  

Post a Comment

<< Home