Friday, January 18, 2008

ಚೆನ್ನೈ ಸಂಗಮಮ್ - ಒಂದು ವಿಹಂಗಮ

ಜಾನಪದ ನೃತ್ಯಪಟುಗಳು, ಶಾಸ್ತ್ರೀಯ ಸಂಗೀತಗಾರರು, ಸಂಗೀತ ವಾದಕರು ಸೇರಿದಂತೆ ಸಾವಿರಾರು ಕಲಾವಿದರು ನಗರದಲ್ಲಿ ಏಕಕಾಲಕ್ಕೆ ವಿವಿಧ ಸ್ಥಳಗಳಲ್ಲಿ ಏಳು ದಿನಗಳ ಕಾಲ ಕಾರ್ಯಕ್ರಮ ನೀಡುವ ಸಂಗತಿ ಹೇಗಿರುತ್ತದೆ? ಹಾಗೆಯೇ ಆ ಎಲ್ಲ ಸ್ಥಳಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳ ವಿಶೇಷ ಭಕ್ಷ್ಯಗಳು ದೊರೆತರೆ ಹೇಗಿರುತ್ತದೆ? ಅಮೋಘ ಅಲ್ಲವೆ?

ಚೆನ್ನೈನಲ್ಲಿ ಈ ರೀತಿಯ ಒಂದು ಕಾರ್ಯಕ್ರಮ ಪೊಂಗಲ್ ಉತ್ಸವಕ್ಕಾಗಿ ಮೈದಳೆದು ಬೆಳೆಯುತ್ತಿದೆ. 'ಚೆನ್ನೈ ಸಂಗಮಮ್' ಎಂಬ ಈ ಕಾರ್ಯಕ್ರಮವನ್ನು ಒಂದು ಉತ್ಸವವೆಂದೇ ಹೇಳಬಹುದು. "ತಿರುವಿಳಾ ನಮ್ಮ ತೆರು ವಿಳಾ" ಎಂದು ಹೇಳಿಕೊಂಡು ಎರಡನೇ ವರ್ಷಕ್ಕೆ ಅಡಿಯಿಟ್ಟ ಚೆನ್ನೈ ಸಂಗಮಮ್ ಜನವರಿ 11 ರಿಂದ 18 ರವರೆಗೆ ಎಂಟು ದಿನಗಳ ಕಾಲ ಭರಪೂರವಾಗಿ ಪ್ರದರ್ಶನಗೊಂಡಿತು. ಚೆನ್ನೈನ ವಿವಿಧೆಡೆ ಹದಿನೆಂಟು ಸ್ಥಳಗಳಲ್ಲಿ ಒಂದು ವಾರ ಕಾಲ ಕಲಾವಿದರು ನೀಡಿದ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಕೊನೆಯ ದಿನ ಅಂದರೆ ಜನವರಿ 18 ರಂದು ಬೆಸೆಂಟ್ ನಗರದಲ್ಲಿರುವ ಎಲಿಸ್ ಬೀಚ್‌ನಲ್ಲಿ ಕಾರ್ಯಕ್ರಮದ ಸಮಾರೋಪ ರಮಣೀಯವಾಗಿತ್ತು. ವಿವಿಧ ಜಾನಪದ ನೃತ್ಯ, ಮಕ್ಕಳ ನೃತ್ಯಗಳು ಮನಸೆಳೆದವು. ಕಾರ್ಯಕ್ರಮವನ್ನು ತನ್ಮಯವಾಗಿ ವೀಕ್ಷಿಸುತ್ತಿರುವಾಗಲೇ ಆಗಸದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಸಿಡಿಯತೊಡಗಿದವು. ಇದು ಒಂದೆರಡು ನಿಮಿಷಗಳವೆರೆಗೆ ಖುಷಿಗಾಗಿ ಪಟಾಕಿ ಹಚ್ಚಿಸಿರಬಹುದೆಂಬ ನಿರೀಕ್ಷೆಯಲ್ಲಿ ನಾವಿದ್ದರೆ ಆಗ ನಡೆದಿದ್ದೇ ಬೇರೆ. ಅರ್ಧ ಗಂಟೆ ನಿರಂತರವಾಗಿ ಆಕಾಶದ ತುಂಬ ಬಣ್ಣ ಬಣ್ಣದ ವಿನ್ಯಾಸಗಳು ಕಾಣತೊಡಗಿದವು. ಆ ಪಟಾಕಿಯ ಸ್ಫೋಟ ಮತ್ತು ಅದು ಆಗಸದಲ್ಲಿ ಮೂಡಿಸುತ್ತಿದ್ದ ವಿವಿಧ ಆಕಾರಗಳ ಚಿತ್ತಾರಗಳಿಗೆ ನಾವು ಶಿಳ್ಳೆ ಹಾಕದೇ ಇರಲಾಗಲಿಲ್ಲ.

ಇದಷ್ಟೇ ಅಲ್ಲದೆ ಆ ಎಂಟು ದಿನಗಳೂ ಜನರಿಗೆ ತಮಿಳುನಾಡಿನ ವಿವಿಧ ಪ್ರದೇಶದ ಭೋಜನಗಳನ್ನು ಸವಿಯುವ ಅವಕಾಶ. ಮಧುರೈ, ವಿರುದನಗರ, ಕಾರೈಕ್ಕುಡಿ (ಚೆಟ್ಟಿನಾಡು), ಕನ್ಯಾಕುಮಾರಿ ಮುಂತಾದೆಡೆ ಸಿಗುವ ವಿಶೇಷ ತಿಂಡಿ, ತಿನಿಸುಗಳನ್ನು ದೊರೆತವು. ಸಾವಿರಕ್ಕೂ ಮೇಲ್ಪಟ್ಟ ಸಂಖ್ಯೆಯಲ್ಲಿ ಕಲಾವಿದರು ಜನರ ಮಧ್ಯೆ ಬೀದಿ ಬೀದಿಗಳಲ್ಲಿ ಪ್ರದರ್ಶನ ನೀಡುವಾಗ ಎಲ್ಲಿಯೂ ಗಲಭೆಗಳು, ಬೀದಿ ಕಾಳಗಗಳು ನಡೆಯಲಿಲ್ಲ.

ಕಳೆದ ವರ್ಷ ಚೆನ್ನೈ ಸಂಗಮಮ್‌ನ ಆರಂಭೋತ್ಸವವಾಗಿತ್ತು (ಫೆಬ್ರವರಿ 20, 2007 ರಂದು ಉದ್ಘಾಟನೆಗೊಂಡಿತು). ಆ ವರ್ಷ ಉತ್ಸವ ಇನ್ನೂ ಹೆಚ್ಚು ಮನಮೋಹಕವಾಗಿತ್ತು. ಜಾನಪದ ನೃತ್ಯ ಕಲಾವಿದರ ತಂಡವೊಂದು ನಿಮ್ಮ ಆಫೀಸು ಅಥವಾ ಮನೆಬೀದಿಯಲ್ಲಿ ದಿಢೀರನೇ ಪ್ರತ್ಯಕ್ಷಗೊಂಡು ಪ್ರದರ್ಶನ ನೀಡಿದರೆ ನಿಮಗೆ ಸಖೇದಾಶ್ಚರ್ಯವಾಗದೇ ಇರುತ್ತದೆಯೇ? ಕಳೆದ ವರ್ಷ ಹೀಗೆಯೇ ಜಾನಪದ ಕಲಾವಿದ ತಂಡಗಳು ನಗರದಲ್ಲಿರುವ ಹಲವಾರು ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಸಾಂಸ್ಕೃತಿ, ಜಾನಪದ ನೃತ್ಯ ಕಾರ್ಯಕ್ರಮಗಳನ್ನು ನೀಡಿ ದಿಢೀರನೇ ಮಾಯವಾಗುತ್ತಿದ್ದವು.

ರಾಜಕೀಯ: ವಾಸ್ತವಿಕವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಚೆನ್ನೈ ಸಂಗಮಮ್ ಹೆಚ್ಚು ರಸವಸತ್ತಾಗಿರಲಿಲ್ಲ. ಕಾರಣ ರಾಜಕೀಯ. ಒಂದು ಒಳ್ಳೆಯ ಕೆಲಸಕ್ಕೆ ರಾಜಕೀಯ ಮೆತ್ತಿಕೊಂಡರೆ ಅದು ರಾಡಿಯಾಗುತ್ತದೆ ಎಂಬುದಕ್ಕೆ ಸಾಕ್ಷಿ ಚೆನ್ನೈ ಸಂಗಮಮ್. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಮುಂದಾಳತ್ವದಲ್ಲಿ ಡಿಎಂಕೆ ಪಕ್ಷದ ಪೋಷಣೆಯಲ್ಲಿ ಈ ಉತ್ಸವ ಚಾಲನೆಗೆ ಬಂತು. ಆರಂಭಗೊಂಡ ವರ್ಷದಲ್ಲಿ ಕಲಾವಿದರು ಬಲು ಉತ್ಸಾಹದಿಂದ ಪಾಲ್ಗೊಂಡರು. ಆದರೆ ಆ ಕಲಾವಿದರಿಗೆ ಸಲ್ಲಬೇಕಿದ್ದ ಸಂಭಾವನೆಗಳನ್ನು ಸರ್ಕಾರ ಸರಿಯಾಗಿ ನೀಡಲಿಲ್ಲ. ಇದರ ಫಲವಾಗಿ ಕಲಾವಿದರ ಉತ್ಸಾಹ ಕುಗ್ಗಿತಲ್ಲದೇ ಈ ವರ್ಷ ಅವದ್ದು ಕಡಿಮೆ ಸಂಖ್ಯೆಯಿತ್ತು. ಸರ್ಕಾರ ಈ ಉತ್ಸವಕ್ಕಾಗಿ ಸುಮಾರು 10 ಕೋಟಿ ರು ಖರ್ಚಿನ ಲೆಕ್ಕ ನೀಡುತ್ತದೆ. ಆದರೆ ವಾಸ್ತವವಾಗಿ ಖರ್ಚಾಗುವುದು 2 ಕೋಟಿ ರುಪಾಯಿಗಳಷ್ಟೇ. ಮಿಕ್ಕಿದ್ದು ಮಾಮೂಲಿಯಾಗಿ ಬೇರೆ ಬೇರೆ ಗುಡಾಣ ಹೊಟ್ಟೆಗಳಿಗೆ ಹೋಗುತ್ತದೆ.

ಚೆನ್ನೈ ನಗರದ ಮೇರು ಪ್ರದರ್ಶನವಾಗಬೇಕಿದ್ದ ಚೆನ್ನೈ ಸಂಗಮಮ್ ಇದೀಗ ಡಿಎಂಕೆಯ ಪ್ರದರ್ಶನವೆಂದು ಹೆಸರು ಪಟ್ಟಿ ಪಡೆದುಕೊಂಡಿದೆ. ಕರುಣಾನಿಧಿಯವರ ಪುತ್ರಿ ಕನಿಮೊಳಿ ಅವರು ಚೆನ್ನೈ ಸಂಗಮಮ್‌ನ ಸಂಚಾಲಕಿ. ಸ್ಟ್ಯಾಲಿನ್ ಹೆಚ್ಚೂ ಕಡಿಮೆ ಇದರ ಬೆಂಗಾವಲು. ಸರ್ಕಾರೇತರ ಸಂಸ್ಥೆಯಾದ ತಮಿಳ್ ಮೈಯಂ ಎಂಬುದು ಚೆನ್ನೈ ಸಂಗಮಮ್ ಉತ್ಸವದ ಉಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ತಮಿಳ್ ಮೈಯಂ ಸಂಸ್ಥೆಯ ಮುಖ್ಯಸ್ಥ ಜಗತ್ ಗ್ಯಾಸ್ಪರ್ ರಾಜ್ ಅವರು ಎಲ್‌ಟಿಟಿಇಯೊಂದಿಗೆ ಶಾಮೀಲಾಗಿದ್ದಾರೆಂಬುದು ಎಲ್ಲೆಡೆ ಇರುವ ವದಂತಿ. ಈ ಹಿನ್ನೆಲೆಯಲ್ಲಿ ಜಯಲಲಿತಾ ನೇತೃತ್ವದ ಏಐಏಡಿಎಂಕೆ ಪಕ್ಷದಿಂದ ಚೆನ್ನೈ ಸಂಗಮಮ್ ಉತ್ಸವಕ್ಕೆ ತೀವ್ರ ಆಕ್ಷೇಪವಿದೆ. ಕರುಣಾನಿಧಿ ಕೆಳಗಿಳಿದು ಅಮ್ಮಾ ಅಧಿಕಾರಕ್ಕೆ ಏರಿದರೆ ಖಂಡಿತ ಈ ಉತ್ಸವ ರದ್ದಾಗುತ್ತದೆ. ಉತ್ತಮ ಪರಿಕಲ್ಪನೆಯ ಒಂದು ಉತ್ಸವ ಇನ್ನು ಮುಂದೆ ನಿಷ್ಕಳಂಕವಾಗಿ ಇರುವಂತೆ ಮಾಡಲು ರಾಜಯಕೀಯ ಪಕ್ಷಗಳು ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಕಾರ್ಯವಹಿಸಬೇಕು.

Labels: ,

1 Comments:

Anonymous Anonymous said...

ಮಾನ್ಯ ಚೆನ್ನೈ ಕನ್ನಡಿಗ,

ಮತ್ತೋರ್ವ ಚೆನ್ನೈ ಕನ್ನಡಿಗನ ಇದೋ ನಮನ...

ಗೆಳೆಯಾ, ಚೆನ್ನೈ ನಲ್ಲಿ ಹಲವು ಕನ್ನಡ ಸಂಘಗಳು ಇವೆ, ನಮ್ಮ ಒಡನಾಟ ಬೇಕೆ...??

ನನ್ನ ಶೃಂಗಾರ ರಸಭರಿತ ಕತೆಗಳ ವಯಸ್ಕರ ಬ್ಲ್ಲಾಗಿನತ್ತ ಕಣ್ಣು ಹಾಯಿಸಿ ನೋಡುವೆಯಾ?

ನಿನಗೆ ಸುಸ್ವಾಗತ...

ಇತಿ ನಿನ್ನ ಸವಿನಯ,

ಶೃಂಗಾರ!
www.shrungara.blogspot.com
www.shrungara.wordpress.com

10:48 AM  

Post a Comment

<< Home