Friday, January 25, 2008

ಲಿಂಗುಸ್ವಾಮಿಯ ಭೀಮನೂ ಭಟ್ಟರ ಗಾಳಿಪಟವೂ...

ನಮ್ಮ ಹಲವಾರು ಮಂದಿಯ ಬಹುನಿರೀಕ್ಷೆಯ ಚಿತ್ರ 'ಗಾಳಿಪಟ'. ಭರ್ಜರಿ ಯಶಸ್ವಿ 'ಮುಂಗಾರು ಮಳೆ' ಚಿತ್ರದ ರೂವಾರಿಗಳಾದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಆ ಚಿತ್ರದ ಹೀರೋ ಗಣೇಶ್ ಮತ್ತೊಮ್ಮೆ ಬೆರೆತ ಚಿತ್ರ ಗಾಳಿಪಟ. ಅದರ ನಿರ್ಮಾಪಕರು ತಮಿಳಿನ ಘಟಾನುಘಟಿ ಎ.ಎಂ.ರತ್ನಂ. ಚಿತ್ರ ಪೂರ ಮಲೆನಾಡಿನ ನಿಸರ್ಗ ಸೌಂದರ್ಯದ ರಮಣೀಯ ಹಿನ್ನೆಲೆ. ಇಷ್ಟು ಸಾಕಲ್ಲವೇ ಒಂದು ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಳ್ಳಲು?

ಚೆನ್ನೈನಲ್ಲಿರುವ ನಮಗೆ 'ಗಾಳಿಪಟ' ಮೊದಲ ಬಾರಿಗೇ ನಿರಾಸೆ ತಂದಿತ್ತು. ಇಲ್ಲಿನ ಕ್ಯಾಸಿನೋ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆಂದು ಮೂರು ವಾರಗಳ ಹಿಂದಿನಿಂದಲೇ ಪೇಪರಿನಲ್ಲಿ ಜಾಹೀರಾತು ಬರುತ್ತಿತ್ತು. ಬಿಡುಗಡೆ ದಿನ ಬಂದರೂ ಚೆನ್ನೈನಲ್ಲಿ ಎಲ್ಲಿಯೂ 'ಗಾಳಿಪಟ' ಹಾರಾಡಲಿಲ್ಲ. ಅಂತೂ ಬೆಂಗಳೂರಿಗೇ ದೌಡಾಯಿಸಿ ಚಿತ್ರವನ್ನು ನೋಡಬೇಕಾಯಿತು. ಚಿತ್ರಮಂದಿರದೊಳಗೆ ಆಗುತ್ತಿದ್ದ ಪ್ರೇಕ್ಷಕರ ಕಲರವ, ಉತ್ಸಾಹಗಳನ್ನು ಕಂಡು ಮನಸಿನೊಳಗೆ ಚಿತ್ರದ ಬಗ್ಗೆ ನೂರಾರು ಗಾಳಿಪಟಗಳು ಹಾರತೊಡಗಿದ್ದವು. ಚಿತ್ರ ಆರಂಭಗೊಂಡು ಒಂದೊಂದೇ ಸನ್ನಿವೇಶಗಳು ಸಂದುಹೋಗುತ್ತಿರುವಂತೆಯೇ ಮನಸಿನೊಳಗೆ ಹಾರಾಡುತ್ತಿದ್ದ ಗಾಳಿಪಟಗಳು ಒಂದೊಂದಾಗಿ ಕಿತ್ತುಹೋಗಿ ಶೂನ್ಯ ಸೇರಿಕೊಂಡವು. ಯೋಗರಾಜ್ ಭಟ್ಟರು 'ಮುಂಗಾರು ಮಳೆ' ಪ್ರಭಾ ವಲಯದಿಂದ ಹೊರಬರದೆ ಗಾಳಿಪಟ ಹಾರಿಸಿದರೆಯೇ? ಅಥವಾ ನನ್ನಂತಹ ಜನರು 'ಮುಂಗಾರು ಮಳೆ' ಯನ್ನು ಮನಸ್ಸಿನಿಂದ ಕಿತ್ತುಹಾಕದೆ ಗಾಳಿಪಟ ನೋಡಿದೆವೆಯೇ? ಆ 'ಮುಂಗಾರು ಮಳೆ' ಯಲ್ಲಿ ಸುರಿದಿದ್ದ ಸಂಭಾಷಣೆಗಳ ಮಳೆಯು ಹಿತಕರವಾಗಿದ್ದರೆ, 'ಗಾಳಿಪಟ'ದಲ್ಲಿ ಆಡಿಸಿದ್ದ ಸಂಭಾಷಣೆಗಳು ಶೀತ, ನೆಗಡಿ ತಂದವು.

ಯೋಗರಾಜ್ ಭಟ್ಟರಿಗೆ ಏನಾಯಿತು? 'ಮುಂಗಾರು ಮಳೆ' ಚಿತ್ರದ ಅಪೂರ್ವ ಗೆಲುವಿಗೆ ಯಾವ ಅಂಶ ಕಾರಣವಾಯಿತು ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲವೆಂದು ಯೋಗರಾಜ್ ಭಟ್ಟರು ಒಮ್ಮೆ ಹೇಳಿದ್ದರು. ಅದೇ ಗೊಂದಲ, ಜಿಜ್ಞಾಸೆಯಲ್ಲಿ ಭಟ್ಟರು ಆ ಚಿತ್ರದ ಯಶಸ್ವಿಗೆ ಯಾವ್ಯಾವ ಅಂಶಗಳು ಕಾರಣವಾದವೋ ಅವನ್ನೆಲ್ಲಾ ಗಾಳಿಪಟಕ್ಕೆ ಬಲವಂತವಾಗಿ ತೂರಿದಂತೆ ಕಾಣುತ್ತದೆ. ಮುಂಮಳೆಯಲ್ಲಿ ಸಂಭಾಷಣೆಗಳು ಸಾಂದರ್ಭಿಕವಾಗಿ ತಕ್ಕುವಾಗಿದ್ದು ಅದರ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಅಂಶ ಅರಿತ ಯೋಗರಾಜ್ ಭಟ್ಟರು ಗಾಳಿಪಟಕ್ಕೆ ಸಂಭಾಷಣೆಗಳ ಮಳೆಯನ್ನೇ ಸುರಿಸುತ್ತಾರೆ. 'ಮುಂಮ'ದ ಸಂಭಾಷಣೆಗಳನ್ನೇ ಜಗ್ಗಿ ಜಗ್ಗಿ ಎಳೆದು ಗಾಳಿಪಟದ ಸೂತ್ರ ಕಿತ್ತುಬರುವಂತೆ ಮಾಡುತ್ತಾರೆ. ಅಲ್ಲಿಯೇ ಗಾಳಿಪಟ ಗೋತಾ ಹೊಡೆಯಲು ಆರಂಭವಾಗುವುದು. ಡಯಲಾಗ್‌ಗಳನ್ನು ಎಷ್ಟು ಬೇಕೊ ಅಷ್ಟು ಇಟ್ಟುಕೊಂಡಿದ್ದರೆ ಬಹುಶಃ ಗಾಳಿಪಟ ಒಂದು ಪಕ್ಕಾ ಮಕ್ಕಳ ಆಟವಾಗುತ್ತಿತ್ತೇನೊ (ಅಂದರೆ ಮನರಂಜಕವಾಗುತ್ತಿತ್ತು).

'ರಂಗ ಎಸ್ಎಸ್ಎಲ್‌ಸಿ' ಮತ್ತು 'ಮಣಿ' ಚಿತ್ರಗಳೆರಡು ಚೆನ್ನಾಗಿದ್ದೂ ನೆಲಕಚ್ಚಿದಾಗ ನಾನು ಭಯದಿಂದಲೇ 'ಮುಂಗಾರು ಮಳೆ' ಮಾಡಿದೆ. ಅದೇನೋ ಯಶಸ್ವಿಯಾಯಿತು. ಈಗ ಆ ಯಶಸ್ವಿಯನ್ನು ಬೆನ್ನಿಗೆ ಹಾಕಿಕೊಂಡು ಭಯದಿಂದಲೇ 'ಗಾಳಿಪಟ' ಮಾಡಿದ್ದೇನೆ ಎಂದು ಯೋಗರಾಜ್ ಭಟ್ಟರು ಗಾಳಿಪಟ ಹಾರಿಸುವ ಮುನ್ನ ಹೇಳಿಕೊಂಡಿದ್ದರು. ಗಾಳಿಪಟ ಗೋತಾ ಹೊಡೆಯಲು ಈ ಭಯವೇ ಕಾರಣವಾಯಿತೆ? ಈ ಭಯ ಎಂಬ ಪದ ಕೇಳಿದಾಗ ನನಗೆ ತಮಿಳಿನ ಲಿಂಗುಸ್ವಾಮಿ ಎಂಬ ನಿರ್ದೇಶಕ ನೆನಪಿಗೆ ಬರುತ್ತಾರೆ.

'ಗಾಳಿಪಟ' ಚಿತ್ರದ ನಿರ್ಮಾಪಕರೇ ಆದ ಎ.ಎಂ.ರತ್ನಂ ಅವರ ನಿರ್ಮಾಣದಲ್ಲಿ ವಿಕ್ರಮ್ ಎಂಬ ದೊಡ್ಡ ನಾಯಕನಟನಿರುವ 'ಭೀಮಾ' ಎಂಬ ಚಿತ್ರದ ನಿರ್ದೇಶಕ ಈ ಲಿಂಗುಸ್ವಾಮಿ. 'ಸಂಡೈಕೋಳಿ' ಯಂತಹ ಕೆಲವು ಅಮೋಘ ಚಿತ್ರಗಳನ್ನು ನಿರ್ದೇಶಿಸಿದ ಅಪ್ರತಿಮ ಪ್ರತಿಭಾವಂತ ನಿರ್ದೇಶಕ, ಸಂಭಾಷಣೆಕಾರ. ಇಂತಹ ವ್ಯಕ್ತಿಯು ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಯದ ಬಗ್ಗೆ ಪ್ರಸ್ತಾಪ ನಡೆಸಿದರು. 'ಭೀಮಾ' ಚಿತ್ರ ನಿರ್ಮಾಣವಾಗಲು ತಗುಲಿದ ಸುಮಾರು ಒಂದೂವರೆ ವರ್ಷಗಳಲ್ಲಿ ಪ್ರತಿಯೊಂದು ದಿನವನ್ನೂ ನಾನು ಭಯದಲ್ಲೇ ಕಳೆಯುತ್ತಿದ್ದೆ. ಕುಂತರೂ, ನಿಂತರೂ ನನಗೆ ಭೀಮನೇ ಕಣ್ಣಿಗೆ ಬರುತ್ತಿತ್ತು. ನೆಂಟರ ಮನೆಗಳಿಗೆ ಹೋಗಿ ಸಮಯ ಸವೆಸಿದರೆ ನಾನೆಲ್ಲಿ ಭೀಮನಿಗೆ ಅನ್ಯಾಯ ಮಾಡುತ್ತಿದ್ದೇನೆಯೋ ಎಂಬಂತಹ ಭಯದ ಭಾವನೆಗಳು ಉಂಟಾಗುತ್ತಿದ್ದುವು ಎಂದು ಲಿಂಗುಸ್ವಾಮಿ ಮನಸ್ಸು ಬಿಚ್ಚಿಕೊಂಡಿದ್ದರು. ಅಂತಹ 'ಭೀಮಾ' ಚಿತ್ರ ಇದೀಗ ಸಂಕ್ರಾಂತಿಯಲ್ಲಿ (ಅಂದರೆ ಪೊಂಗಲ್) ಬಿಡುಗಡೆಯಾಯಿತು. ವಿಶಿಷ್ಟ ಕಥಾವಸ್ತು, ವೇಗಭರಿತ ನಿರೂಪಣೆಯ ಚಾಕಚಕ್ಯತೆ ಹೊಂದಿರುವ ಪಕ್ಕಾ ಕಮರ್ಷಿಯಲ್ ನಿರ್ದೇಶಕ ಲಿಂಗುಸ್ವಾಮಿ ಅವರು 'ಭೀಮಾ' ಚಿತ್ರದಲ್ಲಿ ಎಡವಿದರು. ಯೋಗರಾಜ್ ಭಟ್ಟರು 'ಗಾಳಿಪಟ'ದಲ್ಲಿ ಸಂಭಾಷಣೆಗಳ ಬಾಲ ಹಿಡಿದರೆ, ಲಿಂಗುಸ್ವಾಮಿಯವರು 'ಭೀಮಾ'ದಲ್ಲಿ ಹೊಡೆದಾಟಗಳ ಹಾದಿಹಿಡಿದರು. ಹೀಗಾಗಿ ಸಂಭಾಷಣೆಗಳಿಂದಾಗಿ ಗಾಳಿಪಟದ ಬಾಲಂಗೋಚಿ ಕಿತ್ತುಹೋಯಿತು; ಹೊಡೆದಾಟಗಳಿಂದಾಗಿ ಭೀಮಾ ಶಕ್ತಿ ಕುಂದಿಹೋಯಿತು. ಹಾಗಿದ್ದರೆ ಯೋಗರಾಜ್ ಭಟ್ಟರು ಮತ್ತು ಲಿಂಗುಸ್ವಾಮಿಯವರು ಸೋಲಲು ಕಾರಣ ಅವರ ಮನಸ್ಸಿನೊಳಗೆ ಆವರಿಸಿದ್ದ ಭಯವೇ?

ತುಣುಕು ಅನುಮಾನ: ಯೋಗರಾಜ್ ಭಟ್ಟರು ಮತ್ತೊಬ್ಬ ಉಪೇಂದ್ರ ಆಗಲಿದ್ದಾರೆಯೇ? ಉಪೇಂದ್ರ ಅವರು 'ಶ್', 'ಓಂ' ಮತ್ತು 'ಎ' ಚಿತ್ರಗಳನ್ನು ನಿರ್ದೇಶಿಸಿದಾಗ ಅವರೊಬ್ಬ ವಿಶಿಷ್ಟ ಹಾಗೂ ಸೃಜನಶೀಲ ನಿರ್ದೇಶಕ ಎಂದು ಹೆಸರು ಪಡೆದರು. ಆನಂತರ 'ಉಪೇಂದ್ರ' ಚಿತ್ರ ಮಾಡಿದರು. ಚಿತ್ರವೇನೋ ಭರ್ಜರಿ ಯಶಸ್ವಿಯಾಯಿತಾದರೂ ಎಲ್ಲೋ ಒಂದು ಕಡೆ ಉಪೇಂದ್ರರವರು ಸೃಜನಶೀಲತೆ ಕಳೆದುಕೊಂಡರೇನೋ ಎಂಬಂತೆ ಭಾಸವಾಯಿತು. 'ಆಪರೇಷನ್ ಅಂತ' ಬಂದ ನಂತರ ಇದು ಬಹುತೇಕ ಖಚಿತವಾಯಿತು. ಈಗ ಉಪೇಂದ್ರ ಅವರು ನಿರ್ದೇಶನದ ಗೊಡವೆಯೇ ಬಿಟ್ಟು ಮೈ ಬೆಳೆಸಿಕೊಂಡು ಹೀರೋ ಆಗಿಬಿಟ್ಟಿದ್ದಾರೆ. ಯೋಗರಾಜ್ ಭಟ್ಟರು ಉಪೇಂದ್ರರಂತೆಯೇ ಎಲ್ಲೋ ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೇನೋ ಎಂಬ ಸಣ್ಣ ಭಯ ನಮಗೆ ಕಾಡುತ್ತದೆ.

Labels: ,

5 Comments:

Blogger Unknown said...

ಸ್ವಾಮಿ ಕನ್ನಡದ ಸಾರಥಿಯವರೆ,

ನಿಮ್ಮ ಹೊಸ ಫೋನ್ ನಂಬರ್ ಕೊಡ್ದೆ ನಂಗೆ ಹೀಗೆ ಯಾಮಾರಿಸಬಹುದ?

8:19 PM  
Blogger Shiv said...

ಸಾರಥಿಯವರೇ,

ಗಾಳಿಪಟ ನೋಡೋ ಅವಕಾಶ ಇಲ್ಲ ನನಗೆ ಸಧ್ಯಕ್ಕೆ..
ನಿಮ್ಮ ವಿಮರ್ಶೆ ನೋಡಿದರೆ ಭಟ್ಟರಿಗೆ ಮುಂಮಳೆಯಿಂದ ಹೊರಗೆ ಬರಲಿಕ್ಕೆ ಆಗೇ ಇಲ್ಲಾ ಅನಿಸುತ್ತೆ..

ಭಟ್ಟರು ಉಪೇಂದ್ರ ತರ ಆಗದಿರಲಿ..

5:22 AM  
Blogger dinesh said...

Mungaru male battara talegintha hechhagi adanna nidida namma taleyalli kulitide embudanna nenapittukondare olledu annuva abhipraya nammadu....

3:56 PM  
Blogger Sridhar Raju said...

ನಮಸ್ಕಾರ ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ

12:10 AM  
Anonymous Anonymous said...

Registration- Seminar on the occasion of kannadasaahithya.com 8th year Celebration

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends

-kannadasaahithya.com balaga

2:29 PM  

Post a Comment

<< Home